ನವದೆಹಲಿ : ಗೋವಿನ ರಕ್ಷಣೆಯಾಗಬೇಕೆಂದು ಹೇಳುತ್ತಾ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಬಹಿರಂಗವಾಗಿ ಗೋಹತ್ಯೆಯನ್ನು ಬೆಂಬಲಿಸಿ ಅಧಿಕಾರದಲ್ಲಿರಲು ಸಾಧ್ಯವಿಲ್ಲವೆಂಬ ವಾಸ್ತವ ಮೊಘಲರಿಗೆ ಕೂಡ ತಿಳಿದಿತ್ತು, ಆದರೆ ಬ್ರಿಟಿಷರು ಈ ಅಂಶವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು ಎಂದು ಹೇಳಿದರು.
'ನಾನು ಗೃಹ ಮಂತ್ರಿಯಾದ ನಂತರ ಬಿ.ಎಸ್.ಎಫ್ ಯೋಧರ ನಿರಂತರ ಪ್ರಯತ್ನದಿಂದಾಗಿ ಭಾರತದಿಂದ ಬಾಂಗ್ಲಾದೇಶಕ್ಕೆ ಗೋವುಗಳ ಕಳ್ಳಸಾಗಣೆಯಾಗುವುದನ್ನು ತಡೆಯಲಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದೇನೆ' ಎಂದು ಸಿಂಗ್ ಹೇಳಿದರು.
'ಮೊಘಲ್ ಆಡಳಿತಗಾರರ ಬಗ್ಗೆ ನನಗಿರುವ ಅಲ್ಪ ಸ್ವಲ್ಪ ತಿಳುವಳಿಕೆಯಿಂದ ಹೇಳುತ್ತಿದ್ದೇನೆ, ಅವರಿಗೆ ಈ ವಿಷಯ ಗೊತ್ತಿತ್ತು. ಗೋಹತ್ಯೆಗೆ ಬಹಿರಂಗವಾಗಿ ಬೆಂಬಲ ನೀಡಿ ಬಹಳ ದಿನ ಅಧಿಕಾರ ಮಾಡಲು ಸಾಧ್ಯವಿಲ್ಲವೆಂದು ಅವರು ಅರ್ಥ ಮಾಡಿಕೊಂಡಿದ್ದರು'.
'ಬಾಬರ್ ಕೂಡ ತನ್ನ ಮರಣ ಪತ್ರದಲ್ಲಿ ಒಂದೇ ಸಮಯದಲ್ಲಿ ಎರಡು ಕೆಲಸ ಮಾಡಲು ಸಾಧ್ಯವಿಲ್ಲ. ಜನರ ಹೃದಯ ಗೆಲ್ಲಿ ಅಥವಾ ಗೋಮಾಂಸ ತಿನ್ನಿ. ಇವೆರಡರಲ್ಲಿ ಒಂದೇ ಕೆಲಸ ಸಾಧ್ಯ... ಇವೆರಡನ್ನೂ ಒಟ್ಟಿಗೆ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದ' ಎಂದು ರಾಜನಾಥ್ ಸಿಂಗ್ ಹೇಳಿದರು.
ಅವರು ರಾಷ್ಟ್ರೀಯ ಗೋದಾನ ಮಹಾಸಂಗ, ಕೃಷಿ ಸಚಿವಾಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ ಗೋ ಸಂರಕ್ಷಣೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬ್ರಿಟಿಷರು ಭಾರತಕ್ಕೆ ಬಂದ ಮೇಲೆ, ಭಾರತೀಯ ಸಂಪ್ರದಾಯಕ್ಕೆ ಸಿಗಬೇಕಾದ ಗೌರವ ಸಿಗಲಿಲ್ಲ. ವಾಸ್ತವವಾಗಿ ಪರಿಸ್ಥಿತಿ ಕೆಟ್ಟದಾಯಿತು. ಕೋವಿಗಳ ಕಾಡತೂಸುಗಳಲ್ಲಿ ಹಸುವಿನ ಕೊಬ್ಬನ್ನು ಉಪಯೋಗಿಸಿದ್ದೇ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣ. ಇದು ಗೋವಿನ ಬಗ್ಗೆ ಜನರಿಗೆ ಇರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಕೇಂದ್ರ ಸರಕಾರ ಗೋಹತ್ಯೆಯನ್ನು ನಿಷೇಧಿಸುತ್ತದೆಯೇ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿಸರ ಮತ್ತು ಅರಣ್ಯ ಖಾತೆಯ ರಾಜ್ಯ ಸಚಿವ ಪ್ರಕಾಶ್ ಜಾವ್ಡೇಕರ್, ಇದು ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕಾದ ನಿರ್ಧಾರ ಎಂದರು.
ಗೋವಿನ ಎಲ್ಲಾ ವೈಜ್ನಾನಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಸರಿಯಾಗಿ ಯೋಚಿಸಬೇಕು ಎಂದು ರಾಜನಾಥ್ ಸಿಂಗ್ ತಿಳಿಸಿದರು.
ತಾವು ಗೃಹ ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಗೋರಕ್ಷಣೆಗಾಗಿ ಸರ್ಕಾರ ಮಾಡಿದ ಕೆಲಸಗಳ ಬಗ್ಗೆ ವಿವರಿಸಿದ ಅವರು, 'ಬಿ ಎಸ್ ಎಫ್ ಯೋಧರ ನಿರಂತರ ಪ್ರಯತ್ನದಿಂದಾಗಿ ಬಾಂಗ್ಲಾದೇಶಕ್ಕೆ ಗೋವಿಗಳ ಕಳ್ಳಸಾಗಣೆಯಾಗುವುದು ಕಡಿಮೆಯಾಗಿದೆ. ನಾನು ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಒಳಗೆ, ಭಾರತ-ಬಾಂಗ್ಲಾದೇಶ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಗೋವಿನ ಕಳ್ಳಸಾಗಣೆ ಲೆಕ್ಕ ತೆಗೆದುಕೊಳ್ಳಲು ನಿರ್ಧರಿಸಿದೆ. ಕಳ್ಳಸಾಗಣೆ ತಡೆಯುವುದು ತುಂಬಾ ಕಷ್ಟದ ಕೆಲಸ...ಕಳ್ಳಸಾಗಾಣಿಕೆದಾರರ ಜೊತೆ ಹೋರಾಟ ಮಾಡಬೇಕು' ಎಂದರು.
'ನಾನು ಬಿ ಎಸ್ ಎಫ್ ನವರ ಜೊತೆ ಮಾತನಾಡುತ್ತಾ, ಗೋ ಕಳ್ಳಸಾಗಣೆಯನ್ನು ನಿಲ್ಲಿಸಿದ ದಿನ ಈ ಸಭೆ ಸಾರ್ಥಕವಾಗುತ್ತದೆ' ಎಂದು ಹೇಳಿದೆ ಎಂದರು.
ಸರ್ಕಾರ 500 ಕೋಟಿ ರೂ. ಗಳನ್ನು ಗೋ ಸಂರಕ್ಷಣೆಗಾಗಿ ಮೀಸಲಿಟ್ಟಿದೆ ಮತ್ತು ಭಾರತೀಯ ಗೋತಳಿಗಳ ಬಗ್ಗೆ ಸಂಶೋಧನೆಗಾಗಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ತಿಳಿಸಿದರು.
English Summary : ಸಿಪಾಯಿ ದಂಗೆ