ನವದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಶುಕ್ರವಾರವೂ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಸುಷ್ಮಾ ಸ್ವರಾಜ್ ನಾಟಕ ಪ್ರವೀಣೆ ಎಂದು ಸೋನಿಯಾ ಗಾಂಧಿ ಹೇಳಿದರೆ, ರಾಹುಲ್ ಗಾಂಧಿ ಇನ್ನೂ ಒಂದು ಹೆಜ್ಜೆ ಮುಂದುವರಿದು, ಸುಷ್ಮಾ ಕುಟುಂಬ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಂದ ಎಷ್ಟು ಹಣ ಸ್ವೀಕರಿಸಿದೆ? ಎಂದು ಪ್ರಶ್ನಿಸಿದ್ದಾರೆ.
25 ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ, ಸಂಸತ್ ಎದುರು ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ.
ಐದು ದಿನಗಳವರೆಗೆ ಸಂಸದರನ್ನು ಅಮಾನತುಗೊಳಿಸಿದ ನಂತರವೂ, ವಿದೇಶಾಂಗ ಸಚಿವೆ ಸೇರಿ ಮೂವರು ಬಿಜೆಪಿ ಮುಖಂಡರು ರಾಜೀನಾಮೆಯ ಕೊಡುವವರೆಗೆ ಕಲಾಪ ನಡೆಯಲು ಬಿಡುವುದಿಲ್ಲ ಎಂಬ ಹಠವನ್ನು ಕಾಂಗ್ರೆಸ್ ಮುಂದುವರಿಸಿದೆ.
ಲಲಿತ್ ಗೇಟ್ ಹಗರಣದ ಸಂಬಂಧ ಸುಷ್ಮಾ ಸ್ವರಾಜ್ ರಾಜೀನಾಮೆ ನೀಡಬೇಕೆಂದು ಕೇಳಲಾಗುತ್ತಿದೆ. ಕಳೆದ ವರ್ಷ, ಲಲಿತ್ ಮೋದಿ ಅವರಿಗೆ ಪ್ರವಾಸಿ ದಾಖಲೆಗಳನ್ನು ಒದಗಿಸುವುದರಿಂದ ಭಾರತ-ಇಂಗ್ಲೆಂಡ್ ಬಾಂಧವ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಇಂಗ್ಲೆಂಡ ಸರ್ಕಾರಕ್ಕೆ ಹೇಳಿದ ನಂತರ, ಇಂಗ್ಲೆಂಡ ಸರ್ಕಾರ ಪ್ರವಾಸಿ ದಾಖಲೆಗಳನ್ನು ಒದಗಿಸಿತ್ತು. ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಈ ವಿಷಯವಾಗಿ ಸಚಿವರು ಸಂಪೂರ್ಣ ಗೌಪ್ಯ ಕಾಪಾಡಿದ್ದಾರೆ. ಇದು ಈ ವಿಷಯದಲ್ಲಿ ತಪ್ಪು ನಡೆದಿದೆ ಎನ್ನುವುದನ್ನು ತೋರಿಸುತ್ತದೆ. ಸುಷ್ಮಾ ಅವರ ಕುಟುಂಬದವರು ಲಲಿತ್ ಮೋದಿ ಅವರಿಂದ ಹಣ ಸ್ವೀಕಾರ ಮಾಡಿದ್ದಾರೆ. ಜೈಲುವಾಸದಿಂದ ತಪ್ಪಿಸಿಕೊಳ್ಲಲು ಲಲಿತ್ ಮೋದಿ ಸುಷ್ಮಾ ಕುಟುಂಬಕ್ಕೆ ನಿಖರವಾಗಿ ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ಅವರು ದೇಶಕ್ಕೆ ತಿಳಿಸಲಿ ಎಂದು ಸವಾಲೆಸಿದಿದ್ದಾರೆ.
ಗುರುವಾರ ಸಂಸತ್ತಿನಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ಲಲಿತ್ ಮೋದಿ ಅವರಿಗೆ ಎನಾದರೂ ನೆರವು ನೀಡಿದ್ದರೆ ಅದು ಮಾನವೀಯತೆ ದೃಷ್ಠಿಯಿಂದ ಮಾತ್ರ ಎಂದು ಹೇಳಿದ್ದರು. ಲಲಿತ್ ಮೋದಿಯ ಪತ್ನಿ ಯಾವುದೇ ಕ್ರಿಮಿನಲ್ ಕೇಸ್ ಎದುರಿಸುತ್ತಿಲ್ಲ. ಅವರು ಯಾಕೆ ಕ್ಯಾನ್ಸರ್ ಚಿಕಿತ್ಸೆ ವೇಳೆ ಪತಿಯ ಬೆಂಬಲದಿಂದ ವಂಚಿತರಾಗಬೇಕು? ಎಂದು ಸುಷ್ಮಾ ಸ್ವರಾಜ್ ಪ್ರಶ್ನಿಸಿದ್ದರು. ನೀವು ನನ್ನ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದಿರಿ ಎಂದು ಸೋನಿಯಾ ಗಾಂಧಿ ಅವರನ್ನು ಕೇಳಬಯಸುತ್ತೇನೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ನಾನಾಗಿದ್ದರೆ ಕಾನೂನಿನ ಚೌಕಟ್ಟಿನ ಒಳಗೆ ಮಾತ್ರ ಸಹಾಯ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.