ಜಮ್ಮು-ಕಾಶ್ಮೀರ : ಜಮ್ಮುವಿನ ಉಧಮ್ ಪುರ್ ನಲ್ಲಿ ಬುಧವಾರ ಬೆಳಗ್ಗೆ ಬಿ ಎಸ್ ಎಫ್ ಯೋಧರ ಮೇಲೆ ದಾಳಿ ನಡೆಸಿದ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.
ಸೆರೆ ಸಿಕ್ಕ ಉಗ್ರ ಉಸ್ಮಾನ್ ಪಾಕಿಸ್ತಾನದ ಪೈಸ್ಲಾಬಾದ್ ನವನು ಎಂದು ಪ್ರಾಧಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜಮ್ಮುವಿನ ಐಜಿ ದಾನೀಷ್ ರಾಣಾ ತಿಳಿಸಿದ್ದಾರೆ.
ಉಧಾಮ್ ಪುರ್ ನಿಂದ 10 ಕಿ.ಮೀ ದೂರದ ಹೆದ್ದಾರಿಯಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಬಿ ಎಸ್ ಎಫ್ ಯೋಧರು ಸಾವನ್ನಪ್ಪಿದ್ದರು.
ಬುಧವಾರ ಬೆಳಗ್ಗೆ ಸೇನಾ ಸಮವಸ್ತ್ರ ಧರಿಸಿದ್ದ ಇಬ್ಬರು ಉಗ್ರರು ಬಿ ಎಸ್ ಎಫ್ ಯೋಧರು ಪ್ರಯಾಣ ಮಾಡುತ್ತಿದ್ದ ಬಸ್ ಅನ್ನು ತಡೆದು ಗುಂಡಿನ ಕಾಳಗ ಪ್ರಾರಂಬಿಸಿದರು. ಬಿ ಎಸ್ ಎಫ್ ಯೋಧರ ಪ್ರತಿದಾಳಿಯಲ್ಲಿ ಒಬ್ಬ ಉಗ್ರನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಎರಡನೇ ಉಗ್ರ ಉಸ್ಮಾನ್ ಮೂವರು ಸ್ಥಳೀಯರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು, ದಟ್ಟ ಅರಣ್ಯದಲ್ಲಿರುವ ಹಳ್ಳಿಯಲ್ಲಿ ಅಡಗಿ ಕುಳಿತಿದ್ದ. ಅಲ್ಲಿಯ ಶಾಲೆಯೊಂದರಲ್ಲಿ ನುಗ್ಗಿದ ಉಗ್ರ ಗುಂಡಿನ ಕಾಳಗ ಮುಂದುವರಿಸಿದ್ದ. ಅದೃಶ್ಠವಶಾತ್ ಯೋಜಿತ ಪ್ರತಿಭಟನೆಯೊಂದರ ಹಿನ್ನಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು. ಹಾಗಾಗಿ ದೊಡ್ಡ ಅನಾಹುತವಾಗುವುದು ತಪ್ಪಿದಂತಾಗಿದೆ.
ನಾಲ್ಕು ಗಂಟೆಗಳ ನಂತರ, ಒತ್ತೆಯಾಳುಗಳು ಉಗ್ರನನ್ನು ಸದೆಬಡಿದಿದ್ದಾರೆ. ಜೀವಂತ ಸೆರೆ ಸಿಕ್ಕ ಉಗ್ರ ಉಸ್ಮಾನ್ ಸುಮಾರು 20 ವರ್ಷ ವಯಸ್ಸಿನವನಾಗಿದ್ದಾನೆ.