ಮುಜ್ಹಾಫರ್ ಪುರ : ಬಿಹಾರದ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಬಿಹಾರದ ಅಭಿವೃದ್ಧಿ ಕುಂಠಿತವಾಗಲು ನಿತಿಶ್ ಅವರ ದ್ವೇಷ ರಾಜಕಿಯವೇ ಕಾರಣ, ನನ್ನ ಮೇಲಿನ ಹಗೆಯಿಂದ ಬಿಹಾರದ ಪ್ರಗತಿಯಾಗಲು ನಿತಿಶ್ ಬಿಡಲಿಲ್ಲ ಎಂದು ಅವರು ಹೇಳಿದ್ದಾರೆ.
ಶನಿವಾರ, ಜು.25ರಂದು ಬಿಹಾರದ ರಾಜಧಾನಿ ಪಟ್ನಾದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಟ್ಟ ನಂತರ ಅಪರಾಹ್ನ ಮುಜ್ಹಾಫರ್ ಪುರದಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಭಾಷಣದ ಮುಖ್ಯಾಂಶಗಳು ಹೀಗಿವೆ ಃ
* ಮುಂದಿನ ಸರಕಾರವನ್ನು ಯಾರು ಸ್ಥಾಪಿಸುತ್ತಾರೆ ಎಂದು ವಿಶ್ಲೇಷಿಸಲು ಎಲ್ಲಾ ರಾಜಕೀಯ ಪಂಡಿತರು ಇಲ್ಲಿ ಸೇರಿದ್ದಾರೆ.
* ಸಾಮಾಜಿಕ ಜಾಲತಾಣದಲ್ಲಿ ನಾನು ಮೊದ ಮೊದಲು ಟ್ವೀಟ್ ಮಾಡುತ್ತಿದ್ದಾಗ ಇತರ ನಾಯಕರು ನನ್ನನ್ನು ಗೇಲಿ ಮಾಡುತ್ತಿದ್ದರು. ಈಗ ಅದೇ ನಾಯಕರುಗಳು ಟ್ವೀಟ್ ಮಾಡಲು ಇಷ್ಟ ಪಡುತ್ತಾರೆ.
* 14 ತಿಂಗಳುಗಳ ಬಳಿಕ ಬಿಹಾರಕ್ಕೆ ಬರುತ್ತಿರುವ ನನ್ನನ್ನು ಈ ದಿನ ಬೆಳಗ್ಗೆ ಟ್ವೀಟ್ ಮಾಡಿ ಸ್ವಾಗತಿಸಿದ್ದಾರೆ. ಮುಖ್ಯಮಂತ್ರಿಯವರೇ, ನಿಮ್ಮ ಸ್ವಾಗತಕ್ಕೆ ನಾನು ಋಣಿಯಾಗಿದ್ದೇನೆ.
* ಒಂದು ಕಾಲದಲ್ಲಿ ಅವರು (ನಿತೀಶ್ ಕುಮಾರ್) ಹೇಳುತ್ತಿದ್ದರು, 'ಇಲ್ಲಿ ಈಗಾಗಲೇ ಒಬ್ಬ ಮೋದಿ (ಸುಶೀಲ್ ಮೋದಿ) ಇದ್ದಾರೆ, ನೀವು ಇಲ್ಲಿಗೆ ಬರುವ ಅವಶ್ಯಕತೆ ಏನಿದೆ? ಬರಬೇಡಿ'.
* ಈ ಹಿಂದಿನ ಪ್ರಧಾನಿ ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ಇಲ್ಲಿಗೆ ಕೇವಲ ಒಮ್ಮೆ ಬಂದಿದ್ದರು. ಆದರೆ ನಾನು 14 ತಿಂಗಳುಗಳಲ್ಲಿ ಬರದೇ ಇರುವುದು ಮುಖ್ಯಮಂತ್ರಿಗೆ ಆತಂಕ ಉಂಟುಮಾಡಿದೆ. ಚಿಂತಿಸಬೇಡಿ, ನಾನು ಬಂದಿದ್ದೇನೆ..
* ನೀವು ಬಿಹಾರದಲ್ಲಿ ಬದಲಾವಣೆ ಬಯಸುತ್ತೀರಾ? ಇಲ್ಲಿ ಶಾಂತಿ ನೆಲಸಬೇಕಾ? ನಿರುದ್ಯೋಗದಿಂದ ನಿಮಗೆ ಬಿಡುಗಡೆ ಬೇಕಾ? 'ಗೂಂಡಾ ರಾಜ್' ನಿಂದ ನಿಮಗೆ ಮುಕ್ತಿ ಸಿಗಬೇಕಾ? ಇವೆಲ್ಲಾ ನಿಮಗೆ ಬೇಕಾಗಿದ್ದರೆ ನಮಗೆ ಒಂದು ಅವಕಾಶ ಕೊಡಿ. ಇವೆಲ್ಲವನ್ನೂ ನಾವು ನಿಮಗೆ ಕೇವಲ 7 ತಿಂಗಳುಗಳಲ್ಲಿ ಕೊಡುತ್ತೇವೆ.
* ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ನಾನು ಅಂಥಾ ಕೆಟ್ಟವನಾಗಿದ್ದರೆ ನೀವು (ನಿತೀಶ್ ಕುಮಾರ್) ನನ್ನ ಕೋಣೆಗೆ ಬಂದು ನನನ್ನು ಥಳಿಸಬಹುದು ಅಥವಾ ನನ್ನ ತಲೆಯನ್ನು ಒಡೆಯಬಹುದು. ಆದರೆ ನೀವು ನನ್ನ ಮೇಲಿನ ದ್ವೇಷದಿಂದ ಬಿಹಾರದ ಅಭಿವೃದ್ಧಿಯನ್ನೇ ನಿಲ್ಲಿಸಿಬಿಟ್ಟಿದ್ದೀರಿ.
* ನನ್ನ ಮೇಲಿರುವ ಕೋಪವನ್ನು ಬಿಹಾರದ ಜನತೆಯ ಮೇಲೆ ತೀರಿಸಿರುವುದು ನನಗೆ ಅಪಾರ ದುಃಖವನ್ನುಂಟುಮಾಡಿದೆ.
* ಬಿಹಾರದ ಜನತೆ 'ಗೂಂಡಾರಾಜ್' ನಿಂದ ಮುಕ್ತಿ ಸಿಗಲು ನಿಮ್ಮೊಡನೆ ನಿಂತರು.
* ಇದು ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ನೋಡುವುದಕ್ಕೋಸ್ಕರ ನಡೆಯುವ ಚುನಾವಣೆಯಲ್ಲ. ಇದು ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸುರಕ್ಷತೆಗಾಗಿ ನಡೆಯುವ ಚುನಾವಣೆ.
* ನಮ್ಮನ್ನು ಒಂದು ಸಲ ಪರೀಕ್ಷಿಸಿ. ಬಿಹಾರದ ಜನತೆಯ ಸೇವೆ ಮಾಡಲು ಎನ್.ಡಿ.ಎ. ಗೆ ಒಂದು ಅವಕಾಶ ಕೊಡಿ.
* ದೆಹಲಿಯ ಮೋದಿ ಸರಕಾರ ಅತಿ ಹೆಚ್ಚು ಸಂಖ್ಯೆಯ ಮಂತ್ರಿಗಳನ್ನು, ಅದರಲ್ಲೂ ಅತ್ಯುತ್ತಮ ಸಾಮರ್ಥ್ಯವಿರುವವರನ್ನು ಪ್ರಮುಖ ಖಾತೆಗಳಿಗೆ ಬಿಹಾರದಿಂದಲೇ ತೆಗೆದುಕೊಂಡಿದೆ. ಬಿಹಾರದಿಂದ ಬಂದ ನಾಯಕರು ಇಡೀ ದೇಶವನ್ನು ನಡೆಸುತ್ತಿದ್ದಾರೆ.
* ನೀವು, ಬಿಹಾರದ ಜನತೆ, ಲೋಕಸಭಾ ಚುನಾವಣೆಯಲ್ಲಿ ನಮಗೆ ಅಭೂತಪೂರ್ವ ಜನಾದೇಶವನ್ನು ಕೊಟ್ಟಿದ್ದೀರಿ. ಇನ್ನೊಮ್ಮೆ ಅದನ್ನು ಪುನರಾವರ್ತಿಸಲು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ.
* ಮೋದಿ ಬಿಹಾರದಲ್ಲಿ ಬರಲು ಬಿಡುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಬಿಹಾರದಲ್ಲಿ ಮೋದಿಯ ಅಗತ್ಯವಿಲ್ಲ, ಅದಕ್ಕಾಗಿ ಬಿಹಾರದೊಳಗೆ ಮೋದಿಯನ್ನು ಬರಲು ಬಿಡುವುದಿಲ್ಲ ಎಂದೆಲ್ಲ ಹೇಳುತ್ತಿದ್ದಾರೆ. ಅಂಥವರನ್ನು ನೀವು ಮತ ಕೊಟ್ಟು ಅಧಿಕಾರಕ್ಕೆ ತಂದರೆ, ದೆಹಲಿಯೊಂದಿಗೆ ಇರಬೇಕಾದ ಸಂಪರ್ಕವನ್ನು ಕಡಿದುಕೊಂಡು ಅವರು ಬಿಹಾರದಲ್ಲಿ ಅಡಳಿತ ನಡೆಸುತ್ತಾರೆ.
* ನಮಗೆ ದೆಹಲಿಯೊಂದಿಗೆ ಭುಜಕ್ಕೆ ಭುಜ ಕೊಟ್ಟು ನಡೆಯುವ ಸರಕಾರ ಬೇಕಾಗಿದೆ.
* ನಾನು ಗುಜರಾತಿನಲ್ಲಿ ಹುಟ್ಟಿದ್ದೇನೆ. ನಾನು ಆರಾಧಿಸುವ ಶ್ರೀಕೃಷ್ನ ಪರಮಾತ್ಮ ಜನರಿಗೆ ಸಾಕಷ್ಟು ಕಷ್ಟ ಕೊಟ್ಟಿದ್ದಾನೆ. ಆದರೆ ಅವನು ವಿಷಯುಕ್ತ ಕೃಷ್ನ ಸರ್ಪವನ್ನು ಸಾಯಿಸಿ ಜನರನ್ನು ಕಾಪಾಡಿದ.
* ಕೃಷ್ನನ ಯದು ಕುಲದ ಕೆಲವರು ಮತ್ತವರ ಸಂಗಡಿಗರು ಈಗ 'ವಿಷ'ದ ಬಗ್ಗೆ ದೂರುತ್ತಿರುವುದು ವಿಷಾದದ ಸಂಗತಿಯಾಗಿದೆ. ಯದು ವಂಶದ ಜನರಿಗೆ ಈ ಜನರು ಯಾಕೆ ವಿಷವನ್ನು ಉಣ್ಣಿಸುತ್ತಿದ್ದಾರೆ?
* ಯಾರು ಸರ್ಪ, ಯಾವುದು ವಿಷ ಎಂಬುದನ್ನು ಬಿಹಾರದ ಜನರೇ ನಿರ್ಧರಿಸಲಿ. ಜನರಿಗೆ ನೀವು ವಿಷವನ್ನು ಉಣ್ಣಿಸದಿರಿ.
* ನಿಮಗೆ ವಿದ್ಯುತ್ ಒದಗಿಸದಿದ್ದರೆ ನಿಮ್ಮಲ್ಲಿ ಮತ ಯಾಚಿಸಲು ಬರುವುದಿಲ್ಲ ಎಂದು ಇದೇ ಜನರು ನಿಮಗೆ ಈ ಮೊದಲು ಹೇಳಿಲ್ಲವೆ? ನಿಮಗೆ ವಿದ್ಯುತ್ ಸಿಕ್ಕಿದೆಯೆ? ಹಾಗಾದರೆ ಅವರು ಪುನಃ ಮತ ಕೇಳಲು ನಿಮ್ಮ್ ಹತ್ತಿರ ಯಾಕೆ ಬಂದಿದ್ದಾರೆ?
* ಬಿಹಾರದ ವೈಭವವನ್ನು ಮತ್ತೆ ತರುವುದು ನನ್ನ ಉದ್ದೇಶ.
* ಬಿಹಾರದ ನೆಲದಲ್ಲಿ ರಾಜಕೀಯವಾಗಿ ಬೇರೂರಿದ್ದ ಜಾರ್ಜ್ ಫೆರ್ನಾಂಡಿಸ್ ಅವರನ್ನು ನೀವು ನೆನಪಿಸುತ್ತೀರಾ ? ಅವರ ಜೊತೆಯಾಗಿದ್ದವರು ಕೊನೆಗೆ ಅವರನ್ನು ಯಾವ ರೀತಿಯಾಗಿ ನಡೆಸಿಕೊಂಡರು ಎಂಬುದು ನಿಮಗೆ ನೆನಪಾಗುತ್ತಿದೆಯೆ?
* ಜೊತೆ ಜೊತೆಯಾಗಿ ಕೆಲಸಮಾಡುತ್ತಿದ್ದ ಸುಶಿಲ್ ಮೋದಿಯವರನ್ನು ಸಹ ಅವರು ಹೇಗೆ ನಡೆಸಿಕೊಂಡರು?
* ಆರ್.ಜೆ.ಡಿ ಯ ನಿಜವಾದ ಅರ್ಥ ನಿಮಗೆ ಗೊತ್ತೇ? ಆರ್.ಜೆ.ಡಿ ಅಂದರೆ 'ರೋಜಾನಾ ಜಂಗಲ್ ರಾಜ್ ಕಾ ಢರ್' (ಪ್ರತಿದಿನ ಜಂಗಲ್ ರಾಜ್ ನ ಭಯ).
* ಮುಂಬರುವ ಚುನಾವಣೆ ಜಂಗಲ್ ರಾಜ್ ನ ಭಯದಿಂದ (ಆರ್.ಜೆ.ಡಿ ಯಿಂದ) ಮುಕ್ತಿಯ ಬಗ್ಗೆ ನಡೆಯುವ ಚುನಾವಣೆ.
* ನೋಡಿ ಬಿಹಾರವನ್ನು ಯಾವ ಸ್ಥಿತಿಗೆ ಅವರು ತಂದಿದ್ದಾರೆ? ನಮಗೆ ಒಂದು ಅವಕಾಶ ಕೊಡಿ, ನೋಡಿ ಬಿಹಾರಕ್ಕಾಗಿ ನಾವೇನು ಮಾಡುತ್ತೇವೆ ಅಂತ.
* ನಿಮಗೆ 5,000 ಮೆ.ವಾ. ವಿದ್ಯುತ್ ಅಗತ್ಯವಿದೆ. ಆದರೆ ಈ ಸರಕಾರ ಕೇವಲ 100 ಮೆ.ವಾ ಅಷ್ಟನ್ನೆ ಉತ್ಪಾದಿಸುತ್ತಿದೆ. ನಿಮಗೆ ಮನೆಯಲ್ಲಿ ಟಿ.ವಿ. ನೋಡುವ ಆಸೆಯಿಲ್ಲವೆ? ನಿಮ್ಮ ಮೆಚ್ಚಿನ ಸೀರಿಯಲ್ ನೋಡುವಾಸೆ ನಿಮಗಿಲ್ಲವೆ ? ವಿದ್ಯುತ್ ಇಲ್ಲದಿದ್ದರೆ ಟಿವಿ ಹೇಗೆ ನೋಡುತ್ತೀರಿ?
* ನಿಮ್ಮ ಟ್ರಾಕ್ಟರ್ ಗೆ ಒಂದು ಎಂಜಿನ್ ಬದಲಾಗಿ ಎರಡು ಎಂಜಿನ್ ಇದ್ದರೆ ಅದರ ಶಕ್ತಿ ಇನ್ನಷ್ಟು ಹೆಚ್ಚಾಗುವುದಿಲ್ಲವೆ? ಹಾಗಿದ್ದರೆ ದೆಹಲಿಯಲ್ಲಿ ಒಂದು ಎಂಜಿನ್ ಇದೆ. ಬಿಹಾರದಲ್ಲೂ ಇನ್ನೊಂದು ಎಂಜಿನ್ ಕೊಡಿ.. ನಿಮ್ಮ (ಅಭಿವೃದ್ಧಿಯ) ಟ್ರಾಕ್ಟರ್ ಇನ್ನಷ್ಟು ವೇಗವಾಗಿ ಚಲಿಸುತ್ತದೆ.