ನವದೆಹಲಿ : ಕಾರ್ಮಿಕ ಸಂಘಟನೆಗಳ ಒಮ್ಮತದೊಂದಿಗೆ ಕಾರ್ಮಿಕ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸೋಮವಾರ ನಡೆದ 46 ನೇ ಭಾರತೀಯ ಕಾರ್ಮಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾರ್ಮಿಕ ಸಂಘಟನೆಗಳ ಒಮ್ಮತ ಪಡೆದು ಕಾರ್ಮಿಕ ಕಾನೂನುಗಳನ್ನು ಸರಿಪಡಿಸಲು ಪ್ರಯತ್ನ ಮಾಡಲಾಗುವುದೆಂದು ಹೇಳಿದರು.
ಕಾರ್ಮಿಕ ಸಂಘಟನೆಗಳೊಂದಿಗೆ ಕಾರ್ಮಿಕ ಸುಧಾರಣೆಗಳ ಬಗೆಗಿನ ಮಾತುಕತೆ ನಡೆಯುತ್ತಿದೆ. ಖಂಡಿತಾ ಈ ಕುರಿತು ಪರಿಹಾರ ಸಿಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದರು. ಕಾರ್ಮಿಕರು ಸಂತೋಷದಿಂದ ಇರದಿದ್ದರೆ, ದೇಶದಲ್ಲಿ ಸಂತೋಷ ಇರಲು ಸಾಧ್ಯವಿಲ್ಲ. ದೇಶ ಕಟ್ಟುವಲ್ಲಿ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಾರೆ, ಅವರ ಕನಸು ನನಸಾಗಬೇಂದು ಪ್ರಧಾನಿ ನುಡಿದರು.
ಎಲ್ಲಾ ಕಾನೂನುಗಳನ್ನು ಸರಳಗೊಳಿಸಿ ಸಾಮಾನ್ಯರಿಗೆ ಅರ್ಥವಾಗುವಂತೆ ಮಾಡುವುದೇ ನನ್ನ ಪ್ರಯತ್ನ ಎಂದ ಪ್ರಧಾನಿ ಮೋದಿ, ಬಡವರು ಸಹ ಅವರ ಹಕ್ಕನ್ನು ಅರ್ಥಮಾಡಿಕೊಂಡು ಅದನ್ನು ಪಡೆದಿಕೊಳ್ಳುವಂತಾಗಬೇಕು. ನಾವು ಕಾರ್ಮಿಕರ ಘನತೆಯನು ಗೌರವಿಸಬೇಕು ಎಂದರು.
ಇದಕ್ಕೂ ಮೊದಲು ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಳೆದ 12 ತಿಂಗಳಿಂದ ನಾವು ಕಾರ್ಮಿಕರಿಗೆ ಉತ್ತಮ ಕಾರ್ಯ ಸ್ಥಿತಿ ಒದಗಿಸಲು, ಸಾಮಾಜಿಕ ಭದ್ರತೆ ಒದಗಿಸಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ನ್ಯಾಷನಲ್ ಕರಿಯರ್ ಸರ್ವೀಸ್ ಪೋರ್ಟಲ್ (ರಾಷ್ಟ್ರೀಯ ವೃತ್ತಿಜೀವನ ಸೇವಾ ಪೋರ್ಟಲ್) ಅನ್ನು ಈ ಸಮಯದಲ್ಲಿ ಉದ್ಘಾಟನೆ ಮಾಡಲಾಯಿತು.