ನವದೆಹಲಿ : ಮಂಗಳವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕ್ರಮವಾಗಿ ಸರ್ಕಾರವು ನಾಲ್ಕನೇ ಬಾರಿಗೆ ಭೂಸ್ವಾಧೀನ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಗಳಿವೆ.
ಭೂಸ್ವಾಧೀನ ಮಸೂದೆ ಬಗ್ಗೆ ಯಾವುದೇ ಸಹಮತ ಮೂಡುವ ಸಾಧ್ಯತೆಗಳು ಕಡಿಮೆ ಇರುವ ಕಾರಣ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸಂಸತ್ ಸದಸ್ಯ ಎಸ್ ಎಸ್ ಅಹ್ಲುವಾಲಿಯಾ ಅಧ್ಯಕ್ಷತೆಯಲ್ಲಿ ವಿವಾದಾತ್ಮಕ ಶಾಸನದ ಪರಿಶೀಲನೆಗಾಗಿ ರಚಿಸಲಾದ ಜಂಟಿ ಸಂಸದೀಯ ಸಮತಿಯು ತನ್ನ ವರದಿಯನ್ನು ಅಂತಿಮಗೊಳಿಸಲು ಆಗಸ್ಟ್ 3ರವರೆಗೆ ಇನ್ನೆರಡು ವಾರಗಳ ಅವಧಿ ವಿಸ್ತರಣೆ ಕೋರಲು ಯೋಚಿಸುತ್ತಿದೆ.
ಸಮಿತಿಯು ತನ್ನ ವರದಿ ಮಂಡಿಸಲು ಇನ್ನಷ್ಟು ಕಾಲಾವಕಾಶ ಕೋರಿದಲ್ಲಿ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಸರ್ಕಾರ ಮೂರನೇ ಬಾರಿಗೆ ಮೇ 31ರಂದು ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.
ಮುಂಗಾರು ಅಧಿವೇಶನ ಜುಲೈ 21ರಂದು ಆರಂಭವಾಗಿ ಆಗಸ್ಟ್ 3ರಂದು ಮುಕ್ತಾಯಗೊಳ್ಳಲಿದೆ.
ಯುಪಿಎ -2 ಸರ್ಕಾರದ ಅವಧಿಯೂ ಸೇರಿದಂತೆ ಹಿಂದಿನ ವಿವಿಧ ಸರ್ಕಾರಗಳು ಕನಿಷ್ಠ 6 ಸುಗ್ರೀವಾಜ್ಞೆಗಳನ್ನು ಮೂರು ಬಾರಿ ಹೊರಡಿಸಿವೆ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ.