ನವದೆಹಲಿ : ಪಾರದರ್ಶಕ ಮತ್ತು ಪ್ರಾಮಾಣಿಕ ಆಢಳಿತ ನೀಡುತ್ತೇವೆ ಎಂಬ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ವಿವಾದಗಳಿಂದ ಸುದ್ದಿ ಮಾಡುತ್ತಲೇ ಬಂದಿದೆ.
ಈಗ ವಂಚನೆ, ಹಾಗೂ ನಕಲು ದಾಖಲೆ ಸೃಷ್ಠಿಸಿ ಆಸ್ತಿ ಮಾರಾಟ ಮಾಡಲೆತ್ನಿಸಿದ ಪ್ರಕರಣದಲ್ಲಿ ದೆಹಲಿಯ ಕೊಂಡ್ಲಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಮನೋಜ್ ಕುಮಾರ್ ಪೊಲೀಸರ ಅತಿಥಿಯಾಗಿದ್ದಾರೆ.
ಬೇರೆಯವರಿಗೆ ಸೇರಿದ್ದ ಆಸ್ತಿಯನ್ನು ನಕಲು ದಾಖಲೆ ಪತ್ರ ಸೃಶ್ಠಿಸಿ ತನ್ನದೆಂದು ಮಾರಲು ಪ್ರಯತ್ನಿಸಿದ್ದಾರೆ ಎಂಬ ಆಪಾದನೆ ಮೇರೆಗೆ ಮನೋಜ್ ಕುಮಾರ್ ರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಕಾರ್ಕಾರ್ಡೂಮಾ ಕೋರ್ಟ್ ಗೆ ಹಾಜರುಪಡಿಸಿದ ಅಪಾದಿತ ಶಾಸಕನನ್ನು ಕೋರ್ಟ್ ಎರಡು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಆಗಸ್ಟ್ ನಲ್ಲಿ ದೆಹಲಿಯ ನ್ಯೂ ಅಶೋಕ್ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮನೋಜ್ ಕುಮಾರ್ ವಕೀಲ ಇದೊಂದು ರಾಜಕೀಯ ಪ್ರೇರಿತ ಪ್ರಕರಣ, ಮತ್ತು ಬಂಧನ ಕಾನೂನು ಬಾಹಿರವಾದದ್ದು ಎಂದು ಹೇಳಿದ್ದಾರೆ.
'ದೆಹಲಿ ಸರಕಾರದ ವಿರುದ್ಧ ಸೆಣಸಾಡುತ್ತಿರುವ ಪೊಲೀಸರು (ಆಪ್ ಶಾಸಕ) ಮನೋಜ್ ಕುಮಾರ ರನ್ನು ಸಿಲುಕಿಸಲು ಯತ್ನಿಸುತ್ತಿದ್ದಾರೆ' ಎಂದು ಶಾಸಕನ ವಕೀಲ ಹೆಚ್.ಎಸ್.ಫೂಲ್ಕಾ ಆಪಾದಿಸಿದ್ದಾರೆ.
ಅಂತೂ ಉತ್ತಮ ಆಡಳಿತದ ನಿರೀಕ್ಷೆಯಿಂದ ಭರ್ಜರಿ ಬಹುಮತದಿಂದ ಗೆಲ್ಲಿಸಿದ ಆಪ್ ಸರಕಾರ ಜನರ ಆಶೋತ್ತರಗಳನ್ನು ಈಡೇರಿಸುವ ಕಾರ್ಯವೊಂದನ್ನು ಬಿಟ್ಟು ಮಿಕ್ಕೆಲ್ಲಾ ಕಾರಣಗಳಿಗೆ ಸುದ್ದಿ ಮಾಡುತ್ತಿರುವುದು ವಿಪರ್ಯಾಸ.