ಬೆಂಗಳೂರು : ಕರ್ನಾಟಕ, ಜಾರ್ಖಂಡ್, ಛತ್ತೀಸ್ಘಡ ಮತ್ತು ಒಡಿಶಾಗಳಲ್ಲಿ ನೂತನ ಉಕ್ಕು ಕಾರ್ಖಾನೆ ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಮಂಗಳವಾರ, ಜು.7ರಂದು ಬೆಂಗಳೂರಿನಲ್ಲಿ ನಡೆದ ಸಂಸದೀಯ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ಕೇಂದ್ರ ಗಣಿ ಮತ್ತು ಉಕ್ಕು ಮಂತ್ರಿ ನರೇಂದ್ರ ಸಿಂಗ್ ತೋಮರ್ ಈ ವಿಷಯ ತಿಳಿಸಿದರು. ನಾಲ್ಕು ರಾಜ್ಯಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಕ್ಕು ಕಾರ್ಖಾನೆಗಳಿಗೆ ಅಂದಾಜು ರೂ.1,800 ಕೋಟಿ ವೆಚ್ಚ ತಗಲಲಿದೆ.
ಉಕ್ಕು ಕಾರ್ಖಾನೆ ಸ್ಥಾಪನೆ ಸಂಬಂಧವಾಗಿ ಈಗಾಗಲೇ ಜಾರ್ಖಂಡ ಮತ್ತು ಛತ್ತೀಸ್ಘಡ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಅವರ ಜೊತೆ ಇಂದೇ ಚರ್ಚೆ ನಡೆಸಿ ಶೀಘ್ರದಲ್ಲೇ ಒಡಂಬಡಿಕೆ ಮಾಡಿಕೊಳ್ಳಾಗುವುದು ಎಂದು ತೋಮರ್ ಹೇಳಿದರು.
ಕರ್ನಾಟಕದಲ್ಲಿ ಸ್ಥಾಪಿಸಲಾಗುವ ಕಾರ್ಖಾನೆಗೆ ಸ್ಥಳ ನಿಗದಿಯಾಗಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಈ ಕುರಿತು ಮುಖ್ಯಮಂತ್ರಿಯವರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಉತ್ತರಿಸಿದರು. ನೂತನವಾಗಿ ಸ್ಥಾಪಿತವಾಗುವ ಪ್ರತಿ ಕಾರ್ಖಾನೆ ಆರಂಭಿಕ ಹಂತದಲ್ಲಿ 3 ಮಿಲಿಯನ್ ಟನ್ ಸಾಮರ್ಥ್ಯ ಹೊಂದಿರುತ್ತವೆ. ಇವುಗಳಿಗೆ ಹೆಚ್ಚುವರಿಯಾಗಿ 3 ಮಿಲಿಯನ್ ಟನ್ ವಿಸ್ತರಿಸಬಹುದಾದ ಲೈಸನ್ಸ್ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
ಜಿಲ್ಲಾ ಗಣಿಗಾರಿಕೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸಿದ್ಧಪಡಿಸಲಾಗುತ್ತಿದೆ. ಸ್ಟೀಲ್ ರೀಸರ್ಚ್ ಟೆಕ್ನಾಲಜಿ ಮಿಷನ್ ಸ್ಥಾಪನೆಗೆ ಕೇಂದ್ರ ಸರ್ಕಾರ ರೂ.100 ಕೋಟಿ ಹಾಗೂ ಕಾರ್ಪೋರೇಟ್ ವಲಯದಿಂದ ರೂ.212 ಕೋಟಿ ನೆರವು ಕಲ್ಪಿಸಲಾಗುವುದು ಎಂದರು. 2025ರ ವೇಳೆಗೆ ದೇಶದಲ್ಲಿ 300 ಮಿಲಿಯನ್ ಟನ್ ಉಕ್ಕು ಉತ್ಪಾದನಾ ಗುರಿ ಸಾಧಿಸಲಾಗುತ್ತದೆ ಎಂದು ತೋಮರ್ ಈ ಸಂದರ್ಭದಲ್ಲಿ ಹೇಳಿದರು.