ನವದೆಹಲಿ : ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಅವರನ್ನು ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ’ತುರ್ತು ಪರಿಸ್ಥಿತಿ' ಹೋರಾಟಗಾರರ ಸನ್ಮಾನ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವ ವಿಷಯ ಬೆಳಕಿಗೆ ಬಂದಿದೆ.
ತುರ್ತು ಪರಿಸ್ಥಿತಿಯಿಂದ ಸಂತ್ರಸ್ತರಾದವರಲ್ಲಿ ಅಡ್ವಾಣಿ ಕೂಡ ಒಬ್ಬರಾಗಿದ್ದರು. ಆದರೆ, ತುರ್ತು ಪರಿಸ್ಥಿತಿ ಹೇರಿದ 40ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಡ್ವಾಣಿ ಅವರಿಗೆ ಬಿಜೆಪಿಯಿಂದ ಆಹ್ವಾನವೇ ಇರಲಿಲ್ಲ ಎಂದು ಎನ್ನಲಾಗಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದವರನ್ನು ಸನ್ಮಾನಿಸಲಾಯಿತು. ಆದರೆ, ತುರ್ತು ಪರಿಸ್ಥಿಯ ವೇಳೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ 19 ತಿಂಗಳು ಸುದೀರ್ಘ ಜೈಲುವಾಸ ಅನುಭವಿಸಿದ ಹಿರಿಯ ಮುಖಂಡ ಅಡ್ವಾಣಿ ಅವರು ಕಾರ್ಯಕ್ರಮದಲ್ಲಿ ಇಲ್ಲದೇ ಇರುವುದು ಎದ್ದು ಕಾಣುವಂತಿತ್ತು. ಇತ್ತೀಚೆಗೆ ಅವರನ್ನು ಪಕ್ಷದ 35ನೇ ಸಂಸ್ಥಾಪನಾ ದಿನದ ಕಾರ್ಯಕ್ರಮಕ್ಕೆ ಕೂಡ ಆಹ್ವಾನಿಸಿರಲಿಲ್ಲ.
ಅಡ್ವಾಣಿ ಅವರು ಇತ್ತೀಚೆಗೆ ತುರ್ತು ಪರಿಸ್ಥಿತಿಯ ಕುರಿತು ನೀಡಿದ್ದ ಹೇಳಿಕೆ ಬಿಜೆಪಿಗೆ ಮುಜುಗರ ಉಂಟುಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ. ತುರ್ತು ಪರಿಸ್ಥಿತಿಗೆ 40 ವರ್ಷ ತುಂಬುವುದಕ್ಕೂ ಮುನ್ನ ಸಂದರ್ಶವೊಂದನ್ನು ನೀಡಿದ್ದ ಅವರು, ’ಪ್ರಸ್ತುತ ದಿನಗಳಲ್ಲಿಯೂ ತುರ್ತುಪರಿಸ್ಥಿತಿಯನ್ನು ಹೇರಿಕೆ ಮಾಡುವುದನ್ನು ಅಲ್ಲಗಳೆಯುವಂತಿಲ್ಲ. ಏಕ ವ್ಯಕ್ತಿ ಆಡಳಿತವನ್ನು ತಾವು ಒಪ್ಪುವುದಿಲ್ಲ' ಎಂದು ಹೇಳಿದ್ದರು. ಇದು ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು.