ನವದೆಹಲಿ : ಲಲಿತ್ ಮೋದಿ- ಸುಷ್ಮಾ ಸ್ವರಾಜ್ ಹಗರಣ ಸಂಬಂಧ `ಹಿತಶತ್ರು' ಎಂಬ ಪದ ಬಳಸಿ ಬಿಜೆಪಿಗೆ ಮುಜುಗರ ಉಂಟುಮಾಡಿದ್ದ ಪಕ್ಷದ ಮುಖಂಡ ಕೀರ್ತಿ ಆಜಾದ್ ಈಗ ಬಹಿರಂಗವಾಗಿಯೇ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಲಿತ್ ವಿವಾದ ಭುಗಿಲೆದ್ದ ಬೆನ್ನಲ್ಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಬ್ರಿಟನ್ ಸಂಸದ ಕೇತ್ ವಾಜ್ ನಡುವೆ ನಡೆದ ಇ-ಮೇಲ್ ಸಂಭಾಷಣೆ ಸೋರಿಕೆಯಾದದ್ದರಲ್ಲಿ ಪಕ್ಷದ ಒಳಗಿನವರ ಕೈವಾಡವಿದೆ ಎಂದು ಆಜಾದ್ ಟ್ವೀಟ್ ಮಾಡಿದ್ದರು. ಈಗ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಆಜಾದ್, ’ನನ್ನ ವಿರುದ್ಧ ಪಕ್ಷ ಯಾವ ಕ್ರಮ ಕೈಗೊಂಡರೂ ಅಡ್ಡಿಯಿಲ್ಲ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಅದಕ್ಕಾಗಿ ಹೇಳಿಕೆ ಹಿಂಪಡೆಯುವ ಅಥವಾ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.
’ಐಪಿಎಲ್ 2ನೇ ಆವೃತ್ತಿಯ ವೇಳೆ ಆದ ಫೆಮಾ ಉಲ್ಲಂಘನೆಗೆ ಅರುಣ್ ಜೇಟ್ಲಿ, ಶರದ್ ಪವಾರ್, ಎನ್. ಶ್ರೀನಿವಾಸನ್, ರಾಜೀವ್ ಶುಕ್ಲಾ ಮತ್ತು ಬಿಸಿಸಿಐ ಇತರೆ ಸದಸ್ಯರನ್ನು ಕೂಡ ಹೊಣೆಗಾರರಾಗಿಸಿ. ಐಪಿಎಲ್ನ ಆಡಳಿತ ಮಂಡಳಿ ಮತ್ತು ಬಿಸಿಸಿಐ ಕಾರ್ಯಕಾರಿ ಸಮಿತಿಯಲ್ಲಿದ್ದವರೆಲ್ಲರ ವಿರುದ್ಧವೂ ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು ಎಂದೂ ಆಜಾದ್ ಆಗ್ರಹಿಸಿದ್ದಾರೆ.
ಜತೆಗೆ, ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳೇನಾದರೂ ಐಪಿಎಲ್ನ ಆಡಳಿತ ಮಂಡಳಿ ಮತ್ತು ಬಿಸಿಸಿಐ ಕಾರ್ಯಕಾರಿ ಸಮಿತಿಯಲ್ಲಿದ್ದವರ ವಿರುದ್ಧ ತನಿಖೆಗೆ ಆಗ್ರಹಿಸಿದರೆ, ನಾನು ಬಿಜೆಪಿಯವನಾಗಿದ್ದರೂ ಪ್ರತಿಪಕ್ಷಗಳ ಪ್ರತಿಭಟನೆಯಲ್ಲಿ ಕೈಜೋಡಿಸುತ್ತೇನೆ ಎಂದೂ ಆಜಾದ್ ಹೇಳಿದ್ದಾರೆ.