ನವದೆಹಲಿ : ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ನಾನು ಯಾವುದೇ ಸಹಾಯ ಮಾಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ಲಲಿತ್ ಮೋದಿಗೆ ಪ್ರವಾಸಿ ದಾಖಲೆ ಪತ್ರವನ್ನು ನೀಡಿ ಎಂದು ಇಂಗ್ಲೆಂಡ್ ಸರ್ಕಾರಕ್ಕೆ ಕೇಳಿದ ಯಾವುದೇ ಒಂದು ಟಿಪ್ಪಣಿ, ಪತ್ರ, ಇಮೇಲ್ ಇದ್ದರೆ ಹಾಜರುಪಡಿಸಿ ಎಂದು ಸುಷ್ಮಾ ಸ್ವರಾಜ್ ಪ್ರತಿಪಕ್ಷ ಕಾಂಗ್ರೆಸ್ ಗೆ ಸವಾಲು ಎಸೆದರು.
ಹಲವಾರು ಭೃಷ್ಟಾಚಾರಗಳಲ್ಲಿ ಸಿಲುಕಿರುವ, 2010 ರಲ್ಲಿ ದೇಶ ಬಿಟ್ಟ, ಲಲಿತ್ ಮೋದಿಗೆ ಕಳೆದ ವರ್ಷ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರ ಪತ್ನಿಯ ವೈದ್ಯಕೀಯ ಚಿಕಿತ್ಸೆಗಾಗಿ ಲಂಡಂನ್ ನಿಂದ ಪೋರ್ಚುಗಲ್ ಗೆ ಹೋಗಲು ಅನುಮತಿ ನೀಡಲಾಗಿತ್ತು. ಲಲಿತ್ ಮೋದಿಗೆ ಪ್ರವಾಸಿ ದಾಖಲೆಗಳನ್ನು ಒದಗಿಸಿದರೆ ಭಾರತದ ಜೊತೆಗಿನ ಸಂಬಂಧಕ್ಕೆ ಧಕ್ಕೆ ಆಗುವುದಿಲ್ಲ ಎಂಬ ಭರವಸೆ ಮಾತ್ರ ನಾನು ಇಂಗ್ಲೆಂಡ್ ಸರ್ಕಾರಕ್ಕೆ ನೀಡಿದ್ದೆ ಎಂದು ಸುಷ್ಮಾ ಹೇಳಿದ್ದಾರೆ. ನೀವು ನಿಮ್ಮ ನಿಯಮ ನಿಬಂಧನೆಗಳನ್ನು ಅನುಸರಿಸಿ ಎಂದು ಇಂಗ್ಲೆಂಡ್ ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಅವರ ನಿರ್ಧಾರದ ಮೇಲೆ ಪ್ರಭಾವ ಬೀರಿಲ್ಲ ಎಂದು ಸುಷ್ಮಾ ಸ್ಪಷ್ಟಪಡಿಸಿದರು.
ಲಲಿತ್ ಮೋದಿಯ ಪತ್ನಿ ಯಾವುದೇ ಕ್ರಿಮಿನಲ್ ಕೇಸ್ ಎದುರಿಸುತ್ತಿಲ್ಲ. ಅವರು ಯಾಕೆ ಕ್ಯಾನ್ಸರ್ ಚಿಕಿತ್ಸೆ ವೇಳೆ ಪತಿಯ ಬೆಂಬಲದಿಂದ ವಂಚಿತರಾಗಬೇಕು? ಎಂದು ಸುಷ್ಮಾ ಸ್ವರಾಜ್ ಪ್ರಶ್ನಿಸಿದರು.
ನೀವು ನನ್ನ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದಿರಿ ಎಂದು ಸೋನಿಯಾ ಗಾಂಧಿ ಅವರನ್ನು ಕೇಳಬಯಸುತ್ತೇನೆ ಎಂದರು. ಆದರೆ ಉಳಿದ ಕಾಂಗ್ರೆಸ್ ನಾಯಕರಂತೆ ಸೋನಿಯಾ ಗಾಂಧಿ ಸಹ ಗುರುವಾರ ಕಲಾಪಕ್ಕೆ ಹಾಜರಾಗಿರಲಿಲ್ಲ.
ಲಲಿತ್ ಮೋದಿ ಹಗರಣದಲ್ಲಿ ಸುಷ್ಮಾ ಸ್ವರಾಜ್ ಹೆಸರು ಕೇಳಿ ಬಂದಿದ್ದರಿಂದ, ಸುಷ್ಮಾ ಅವರು ರಾಜೀನಾಮೆ ನೀಡಬೇಕು, ಆಮೇಲೆಯಷ್ಟೇ ಕಲಾಪ ನಡೆಯಲು ಸಾಧ್ಯ ಎಂದು ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಮುಂಗಾರು ಅಧಿವೇಶನದ ಪ್ರಾರಂಭದ ದಿನದಿಂದ ಪಟ್ಟುಹಿಡಿದಿವೆ.
ಆದರೆ ಸುಷ್ಮಾ ಸ್ವರಾಜ್ ಅವರ ವಿವರಣೆ ನಮಗೆ ತೃಪ್ತಿ ತಂದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.