ನವದೆಹಲಿ : ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಗೆ ಸಹಾಯ ಮಾಡಿ ವಿವಾದಕ್ಕೀಡಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಸಿಎಂ ವಸುಂಧರಾ ರಾಜೇ ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಇವರಿಬ್ಬರೂ ರಾಜೀನಾಮೆ ನೀಡುತ್ತಾರೆ ಎಂಬುದು ಕೇವಲ ವದಂತಿ. ಆರೋಪಕ್ಕೆ ಯಾವುದೇ ತಾಂತ್ರಿಕ ಅಥವಾ ಕಾನೂನುಬದ್ಧ ಆಧಾರವಿಲ್ಲ. ಲಲಿತ್ ಮೋದಿ ಅವರ ಬ್ರಿಟನ್ ವಲಸೆ ಅರ್ಜಿಗೆ ರಾಜೇ ಅವರು ಲಿಖಿತ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಯಬೇಕಷ್ಟೆ. ಲಲಿತ್ ಕುಟುಂಬದೊಂದಿಗೆ ಆತ್ಮೀಯ ಸಂಬಂಧವಿತ್ತು ಎಂಬುದನ್ನು ರಾಜೇ ಅವರು ನಿರಾಕರಿಸಿಲ್ಲ. ಆದರೆ, ಅವರು ಲಲಿತ್ಗೆ ಬೆಂಬಲಿಸಿದ ಅರ್ಜಿಯ ಪರಿಶೀಲನೆಯನ್ನು ಇನ್ನಷ್ಟೇ ನಡೆಸಬೇಕಿದೆ ಎಂದು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ತಿಳಿಸಿದ್ದಾರೆ.
ರಾಜೇ ಪುತ್ರ ದುಶ್ಯಂತ್ ಸಿಂಗ್ ಪ್ರಕರಣದ ಬಗ್ಗೆ ಹೇಳುವುದಾದರೆ, ಅವರ ಕಂಪನಿಯ ಎಲ್ಲ ಸತ್ಯವನ್ನು ಸಾರ್ವಜನಿಕರ ಮುಂದೆ ಇಡಲಾಗಿದೆ. ಐಟಿ ರಿಟರ್ನ್ಸ್ ಮತ್ತು ಚುನಾವಣಾ ಅಫಿಡವಿಟ್ ನಲ್ಲೂ ಈ ಬಗ್ಗೆ ಮಾಹಿತಿಯಿದೆ. ಮೊದಲ ಪುಟದಿಂದ ದುಶ್ಯಂತ್ ಕಾನೂನುಬಾಹಿರ ವಹಿವಾಟು ನಡೆಸಿಲ್ಲ. ಬಾಕಿಯಿದ್ದ ಎಲ್ಲ ತೆರಿಗೆಗಳನ್ನೂ ಪಾವತಿಸಾಲಿಗದೆ ಎಂದು ತ್ರಿವೇದಿ ಹೇಳಿದ್ದಾರೆ. ಜತೆಗೆ, ಸುಷ್ಮಾ ಸ್ವರಾಜ್ ವಿಚಾರದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ ಮೇಲೆ ನಾವೇನೂ ಹೇಳಲು ಉಳಿದಿಲ್ಲ ಎಂದು ಅವರು ಹೇಳಿದ್ದಾರೆ.