ನವದೆಹಲಿ : ಐಪಿಎಲ್ ಕ್ರಿಕೆಟ್ ಹಗರಣಗಳ ಆರೋಪ ಹೊತ್ತು ಲಂಡನ್ ನಲ್ಲಿ ನೆಲೆಸಿರುವ ಬಿಸಿಸಿಐ ಮಾಜಿ ಉಪಾಧ್ಯಕ್ಷ ಲಲಿತ್ ಮೋದಿ ಅವರಿಗೆ ನೆರವು ನೀಡಿ ಪ್ರತ್ಯುಪಕಾರ ಪಡೆದ ಗುರುತರ ಆರೋಪ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ಕೇಳಿ ಬಂದಿದೆ.
’ಲಲಿತ್ ಮೋದಿ ಅವರಿಗೆ ಬ್ರಿಟನ್ ಸರ್ಕಾರದಿಂದ ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೊಡಿಸಲು ಸುಷ್ಮಾ ಸ್ವರಾಜ್ ನೆರವಾಗಿದ್ದರು. ಇದಕ್ಕೆ ಪ್ರತಿಯಾಗಿ ಲಲಿತ್ ಮೋದಿಗೆ ಆಪ್ತರಾದ ಬ್ರಿಟನ್ ಸಂಸದರೊಬ್ಬರಿಂದ ಸುಷ್ಮಾ ಕೆಲವು ನೆರವು ಪಡೆದುಕೊಂಡಿದ್ದರು' ಎಂದು ಬ್ರಿಟನ್ ನ ಮಾಧ್ಯಮವೊಂದು ವರದಿ ಮಾಡಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಸುಷ್ಮಾ ಸ್ವರಾಜ್ ರಾಜೀನಾಮೆಗೆ ಒತ್ತಡ ಹೇರುತ್ತಿವೆ.
ಈ ಆರೋಪವನ್ನು ಸ್ವತಃ ಸುಷ್ಮಾ ಸ್ವರಾಜ್ ತಳ್ಳಿ ಹಾಕಿದ್ದಾರೆ. ಕೇಂದ್ರ ಸರಕಾರ, ಬಿಜೆಪಿ ಹಾಗೂ ಸಂಘ ಪರಿವಾರ ವಿದೇಶಾಂಗ ಮಂತ್ರಿಯ ಬೆಂಬಲಕ್ಕೆ ನಿಂತಿವೆ. ಬಿಜೆಪಿಯ ಕಟ್ಟಾ ವಿರೋಧಿ ಪಕ್ಷವಾದ ಸಮಾಜವಾದಿ ಪಾರ್ಟಿ, ಈ ವಿಷಯದಲ್ಲಿ ಸುಷ್ಮಾ ಬೆಂಬಲಕ್ಕೆ ನಿಂತಿದ್ದು ವಿಶೇಷವಾಗಿದೆ.ಈ ನಡುವೆ, ತನ್ನದೇನೂ ತಪ್ಪಿಲ್ಲ ಎಂದು ಸುಷ್ಮಾ ಸ್ವರಾಜ್ ಸಮರ್ಥಿಸಿಕೊಂಡಿದ್ದಾರೆ. ’ಲಲಿತ್ ಮೋದಿ ಪತ್ನಿಗೆ ಪೋರ್ಚುಗಲ್ ನಲ್ಲಿ ಕ್ಯಾನ್ಸರ್ ಶಸ್ತ್ರಕ್ರಿಯೆ ನಡೆಯುತ್ತಿತ್ತು. ಈ ಕಾರಣ, ಲಲಿತ್ ಅವರ ಪೋರ್ಚುಗಲ್ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವ ಬಗ್ಗೆ ಕಾನೂನು ರೀತ್ಯ ಪರಿಶೀಲಿಸಿ ಅವರಿಗೆ ಆ ದಾಖಲೆಗಳನ್ನು ಕೊಟ್ಟರೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಯಾವುದೇ ತೊಂದರೆಯಾಗದು ಎಂದು ಕಳೆದ ವರ್ಷ ಬ್ರಿಟನ್ ಸರಕಾರಕ್ಕೆ ತಿಳಿಸಿದ್ದೆ' ಎಂದು ಸ್ವತಃ ಸುಷ್ಮಾ ಒಪ್ಪಿಕೊಂಡಿದ್ದಾರೆ. ಆದರೆ "ಲಲಿತ್ ಗೆ ಲಾಭವಾಗುವಂಥ ಯಾವುದೇ ನೆರವು ನೀಡಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ನೆರವು ನೀಡಿದ್ದೆ. ಅವರಿಂದ ಯಾವುದೇ ಪ್ರತ್ಯುಪಕಾರವನ್ನು ಸ್ವೀಕರಿಸಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸುಷ್ಮಾ ಸ್ವರಾಜ್ ಈ ವಿಚಾರವಾಗಿ ಮಾತುಕತೆ ನಡೆಸಿ ತನ್ನದೇನೂ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಗೃಹ ಸಚಿವ ರಾಜನಾಥ ಸಿಂಗ್ ಅವರು ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದಾರೆ. ಬಳಿಕ ಸುಷ್ಮಾ ಸ್ವರಾಜ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಬ್ರಿಟನ್ ನ ಪತ್ರಿಕೆ ’ದ ಸಂಡೇ ಟೈಮ್ಸ್’ ಪ್ರಕಟಿಸಿರುವ ವರದಿಯಲ್ಲಿ ಅಕ್ರಮ ದಂಧೆಗಳ ತನಿಖೆ, ಬಂಧನ ಭೀತಿಯಿಂದ ಭಾರತ ತೊರೆದು 2010ರಿಂದ ಲಂಡನ್ ನಲ್ಲಿ ವಾಸಿಸುತ್ತಿರುವ ಲಲಿತ್ ಮೋದಿಗೆ ವಿದೇಶ ಪ್ರಯಾಣದ ದಾಖಲೆಗಳನ್ನು ಕೊಡಿಸಲು ಸುಷ್ಮಾ ಸ್ವರಾಜ್ ಅವರು ನೆರವಾಗಿದ್ದಾರೆ. ಭಾರತೀಯ ಮೂಲದ ಬ್ರಿಟನ್ ಸಂಸದ ಕೀತ್ ವಾಜ್ ಹಾಗೂ ಬ್ರಿಟನ್ ಹೈಕಮೀಷನರ್ ಜೇಮ್ಸ್ ಬೆವನ್ ಅವರಲ್ಲಿ ಈ ಕುರಿತು ಸುಷ್ಮಾ ಮಾತನಾಡಿದ್ದಾರೆ ಎಂದು ಸೋರಿಕೆಯಾದ ಕೆಲ ಇಧಿಮೇಲ್ ಆಧರಿಸಿ ಆ ಪತ್ರಿಕೆ ವರದಿ ಪ್ರಕಟಿಸಿದೆ.
ಅಲ್ಲದೆ ಸುಷ್ಮಾ ಅವರ ಬಂಧು ಜ್ಯೋತಿರ್ಮಯ್ ಕೌಶಲ್ ಎಂಬವರು ಬ್ರಿಟನ್ನಲ್ಲಿ ಕಾನೂನು ಕೋರ್ಸ್ ಪ್ರವೇಶ ಪಡೆಯಲು ಲಲಿತ್ ಮೋದಿ ಮತ್ತು ಕೀತ್ ವಾಜ್ ಅವರು ನೆರವಾಗಿ ಪ್ರತ್ಯುಪಕಾರ ಮಾಡಿದ್ದರು ಎಂದೂ ಆಪಾದಿಸಲಾಗಿದೆ.