ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಕಿತ್ತಾಟ ಮತ್ತೆ ತಾರಕಕ್ಕೇರಿದ್ದು, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯ ಮುಖ್ಯಸ್ಥರಿಗೆ ಅಧಿಕಾರ ವಹಿಸಿಕೊಳ್ಳದಂತೆ ಆಪ್ ಸರ್ಕಾರ ತಡೆ ನೀಡಿದೆ.
ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಜೂ.8ರಂದು ದೆಹಲಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಮುಖೇಶ್ ಕುಮಾರ್ ಮೀನಾ ಅವರನ್ನು ಎಸಿಬಿ ಮುಖ್ಯಸ್ಥರನ್ನಾಗಿ ನೇಮಸಿದ್ದರು. ಆದರೆ ಆಪ್ ಸರ್ಕಾರ ಈಗ, ನಿಮ್ಮ ಅವಶ್ಯಕತೆ ನಮಗೆ ಇಲ್ಲ. ನೀವು ವಾಪಸ್ ದೆಹಲಿ ಪೊಲೀಸ್ ಇಲಾಖೆಗೆ ಹೋಗಿ ಎಂದು ಮೀನಾ ಅವರಿಗೆ ಸೂಚಿಸಿದೆ.
ಈ ಸಂಬಂಧ ಮೀನಾ ಅವರಿಗೆ ಪತ್ರ ಬರೆದಿರುವ ದೆಹಲಿ ಸರ್ಕಾರದ ಕಾರ್ಯದರ್ಶಿ ಹಾಗೂ ನಿರ್ದೇಶಕ ಸುಕೇಶ್ ಕುಮಾರ್ ಜೈನ್, ದೆಹಲಿ ಎಸಿಬಿಯಲ್ಲಿ ಜಂಟಿ ಆಯುಕ್ತರ ಹುದ್ದೆ ಇಲ್ಲ. ಇಲ್ಲದ ಹುದ್ದೆಗೆ ನೀವು ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವಾಪಸ್ ತೆರಳುವಂತೆ ಸೂಚಿಸಿದ್ದಾರೆ.
ಈ ಮಧ್ಯೆ ಎಸಿಬಿ ಮುಖ್ಯಸ್ಥರ ನೇಮಕಕ್ಕೆ ಸಹಿ ಹಾಕಿದ್ದ ದೆಹಲಿ ಗೃಹ ಸಚಿವಾಲಯದ ಕಾರ್ಯದರ್ಶಿ ಧರಂಪಾಲ್ ಅವರನ್ನು ಸಹ ಕೇಜ್ರಿವಾಲ್ ಸರ್ಕಾರ ವರ್ಗಾವಣೆ ಮಾಡಿದ್ದು, ದೆಹಲಿ ಸಿಎಂ ಮತ್ತು ಗವರ್ನರ್ ನಡುವಿನ ಕಿತ್ತಾಟ ಮತ್ತಷ್ಟು ತೀವ್ರಗೊಂಡಿದೆ.