ನವದೆಹಲಿ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದ ಮುಂದೆ ಕದಂಬ ಗಿಡ ನೆಡುವ ಮೂಲಕ ಜನರಲ್ಲಿ ಗಿಡ ನೆಟ್ಟು ಪರಿಸರವನ್ನು ಉಳಿಸಿ, ಬೆಳೆಸಿ ಎಂದು ಕರೆ ನೀಡಿದ್ದಾರೆ.
ಗಿಡದ ಜತೆಗೆ ಅವರು, ಸಾಂಪ್ರದಾಯಿಕವಾದ ಮಣ್ಣಿನ ಮಡಕೆಯನ್ನು ಇಟ್ಟರು. ಬಳಿಕ ಮಾತನಾಡಿದ ಅವರು, ಪರಿಸರಕ್ಕೆ ಪೂರಕವಾದ ಕೆಲಸ ಮಾಡುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸಬಹುದು ಎಂದು ಹೇಳಿದ್ದಾರೆ. ಭೂಮಿಯಲ್ಲಿ ಯಾವತ್ತಿಗೂ ನೀರು ಇರಬೇಕು, ಗಿಡ-ಮರ ಮತ್ತು ಜಲ ಒಂದಕ್ಕೊಂದು ಪೂರಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಧಾನಿ ಮೋದಿಗೆ ಸಾಥ್ ನೀಡಿದರು.
ವಿಶ್ವಾದ್ಯಂತ ಜೂನ್ 5ರಂದು ಪರಿಸರ ದಿನವನ್ನು ಆಚರಿಸಲಾಗುತ್ತದೆ. ಏಳು ಶತಕೋಟಿ ಕನಸು,ಒಂದು ಗ್ರಹ, ಜಾಗ್ರತೆಯಿಂದ ಬಳಸಿ' ಎಂಬುದು ಈ ವರ್ಷದ ಪರಿಸರ ದಿನಾಚರಣೆಯ ಘೋಷವಾಕ್ಯವಾಗಿದೆ.