ನವದೆಹಲಿ : 1984ರ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಸಾಕ್ಷಿ ಮೇಲೆ ಪ್ರಭಾವ ಬೀರಿದ್ದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ದೆಹಲಿ ಕೋರ್ಟ್ ಸಿಬಿಐಗೆ ಸೂಚನೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದ ಸಿಬಿಐಯನ್ನು ದೆಹಲಿ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಪ್ರಕರಣದಲ್ಲಿ ಸಾಕ್ಷಿಯ ಮೇಲೆ ಪ್ರಭಾವ ಬೀರಿದ್ದ ಟೈಟ್ಲರ್ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆ.
ಟೈಟ್ಲರ್ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಜೂನ್ 26ರೊಳಗೆ ವರದಿ ನೀಡುವಂತೆ ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಪಿಎಸ್ ಲಾಲೆರ್ ಅವರು ಸಿಬಿಐಗೆ ಆದೇಶ ನೀಡಿದ್ದಾರೆ.
ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಟೈಟ್ಲರ್, ಪ್ರಕರಣದ ಪ್ರಮುಖ ಸಾಕ್ಷಿಯ ಮೇಲೆ ಪ್ರಭಾವ ಬೀರುವ ದೃಷ್ಟಿಯಲ್ಲಿ ಕೆನಡಾದಲ್ಲಿರುವ ಸಾಕ್ಷಿಯ ತಂಗಿ ಖಾತೆಗೆ 5 ಕೋಟಿ ರೂಪಾಯಿ ಹಣವನ್ನು ವರ್ಗಾಯಿಸಿದ್ದರು. ಈ ಹಣವನ್ನು ಉದ್ಯಮಿ ಅಭಿಷೇಖ್ ವರ್ಮಾ ಖಾತೆಗೆ ವರ್ಗಾಯಿಸಿದ್ದರು. ಈ ವಿಷಯ ಬಂಧಿತ ವರ್ಮಾ ಬಹಿರಂಗಗೊಳಿಸಿದ ನಂತರ ಟೈಟ್ಲರ್ ವಿರುದ್ಧ ಹಣ ದುರುಪಯೋಗದ ಕೇಸ್ ಕೂಡಾ ದಾಖಲಾಗಿತ್ತು.