ನವದೆಹಲಿ : ಯಾವುದೇ ಸಮಸ್ಯೆ ಇರಲಿ, ಮಧ್ಯರಾತ್ರಿ ಬಂದು ನನ್ನ ಮನೆ ಬಾಗಿಲು ತಟ್ಟಿ, ನಾನು ನಿಮ್ಮ ಅಹವಾಲು ಸ್ವೀಕರಿಸಲು ಸದಾ ಸಿದ್ಧನಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮ್ ಮುಖಂಡರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ನೇತೃತ್ವದ 30 ಮಂದಿ ಮುಸ್ಲಿಮ್ ಮುಖಂಡರ ನಿಯೋಗ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಮೋದಿ ಅವರ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಸುಮಾರು 45 ನಿಮಿಷಗಳ ಕಾಲ ನಿಯೋಗದ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಜಾತಿಯ ಹೆಸರಿನಲ್ಲಿ ಜನರನ್ನು ಒಡೆದು ಆಳುವ ರಾಜಕೀಯದಲ್ಲಿ ನಂಬಿಕೆ ಇಡಬೇಡಿ. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂಬ ರಾಜಕೀಯ ವಿಭಜನೆಯಿಂದಾಗಿ ಈಗಾಗಲೇ ದೇಶಕ್ಕೆ ಅಪಾರ ಹಾನಿ ಉಂಟಾಗಿದೆ. ಉದ್ಯೋಗ ಮತ್ತು ಅಭಿವೃದ್ಧಿ ಮಾತ್ರವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ಹೇಳಿದರು.
ಸಮಸ್ಯೆಗಳನ್ನು ಹೇಳಲು 12 ಗಂಟೆ ರಾತ್ರಿ ಸಮಯದಲ್ಲಿ ಬಂದು ನನ್ನ ಮನೆ ಬಾಗಿಲು ಬಡಿದರೂ ಕೂಡಾ ನಾನು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ. ಪ್ರತಿಯೊಬ್ಬ ಭಾರತೀಯರಿಗೂ ನಾನು ಹೊಣೆಗಾರನಾಗಿದ್ದೇನೆ ಎಂದು ಮೋದಿ ಆಶ್ವಾಸನೆ ನೀಡಿದ್ದಾರೆ ಎಂದು ಇಲ್ಯಾಸಿ ತಿಳಿಸಿದ್ದಾರೆ.