ಬೆಗಳೂರು : ಕಾಂಗ್ರೆಸ್ ನಲ್ಲಿ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದು, ಕೆಲ ತಿಂಗಳಲ್ಲಿ ಕೆಪಿಸಿಸಿ ಪುನಾರಚನೆಯಾಗಲಿದ್ದು, ಹೊಸ ಸಾರಥಿ ನೇಮಕವಾಗಲಿದ್ದಾರೆ.
5 ವರ್ಷದ ಅಧಿಕಾರವಧಿ ಪೂರೈಸಿರುವ ಡಾ.ಜಿ.ಪರಮೇಶ್ವರ್ ಸ್ಥಾನಕ್ಕೆ ನೇಮಕವಾಗಲಿರುವ ಹೊಸ ಅಧ್ಯಕ್ಷರು ಯಾರು ಎಂಬ ಚರ್ಚೆ ಆಡಳಿತ ಪಕ್ಷದಲ್ಲಿ ಮತ್ತೆ ಆರಂಭವಾಗಿದೆ.
2018 ರ ಚುನಾವಣೆಪೂರ್ವದಲ್ಲಿ ಬೇರೊಬ್ಬರಿಗೆ ಪಟ್ಟ ಕಟ್ಟುವ ಚಿಂತನೆ ನಡೆದಿದೆ ಎಂದು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ಸಚಿವ ಎಸ್.ಆರ್.ಪಾಟೀಲ್, ಸಂಸದ ಪ್ರಕಾಶ್ ಹುಕ್ಕೇರಿ ಹಾಗೂ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದವು. ಈ ಲೆಕ್ಕಾಚಾರದಲ್ಲಿಯೇ ಅಧ್ಯಕ್ಷರ ನೇಮಕವಾಗಲಿದೆಯೇ ಅಥವಾ ಹೊಸ ನಾಯಕತ್ವಕ್ಕೆ ಎಐಸಿಸಿ ವರಿಷ್ಠರು ಮುಂದಾಗುವರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಪರಮೇಶ್ವರ್ ಮುಂದಿನ ಸ್ಥಾನವೇನು? ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆಯೇ ಎಂಬುದು ಕೌತುಕಕ್ಕೆ ಕಾರಣವಾಗಿದೆ.
ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕದ ಬಳಿಕವಷ್ಟೇ ಪದಾಧಿಕಾರಿಗಳ ನೇಮಕವಾಗಲಿದೆ.
ಜೂನ್ 2ನೇ ವಾರದಲ್ಲಿ ಎಐಸಿಸಿ ಚುನಾವಣಾ ಸಮಿತಿಯು ಪಕ್ಷದ ಸಾಂಸ್ಥಿಕ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ. ಈ ಚುನಾವಣೆ ಬಳಿಕ ಕೆಪಿಸಿಸಿ ಕಾರ್ಯಕಾರಿ ಸಮಿತಿ ಪುನಾರಚನೆಗೊಂಡು ಹೊಸ ಅಧ್ಯಕ್ಷರು ನೇಮಕಗೊಳ್ಳಲಿದ್ದಾರೆ.