ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ’ಚಾಯ್ ಪೆ ಚರ್ಚಾ'ಗೆ ಆಹ್ವಾನ ನೀಡಿದ್ದಾರೆ.
ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಜತೆ ಚಹಾಕೂಟ ನಡೆಸಿದ್ದ ನರೇಂದ್ರ ಮೋದಿ ಇದೀಗ ಗೌಡರಿಗೂ ಆಹ್ವಾನ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ದೇವೇಗೌಡರೇ ಖಚಿತಪಡಿಸಿದ್ದು, ’ಪ್ರಧಾನಿ ಕಚೇರಿಯಿಂದ ನನ್ನ ಆಪ್ತ ಸಹಾಯಕನಿಗೆ ಕರೆ ಬಂದಿದೆ. ಮೋದಿ ಅವರ ಜತೆ ಚಹಾಕೂಟದೊಂದಿಗೆ ಮಾತುಕತೆ ನಡೆಸಲು ಬನ್ನಿ ಎಂದು ಕರೆದಿದ್ದಾರೆ' ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ಜೂನ್ 3 ಅಥವಾ 4ರಂದು ದೆಹಲಿಗೆ ಹೋಗುತ್ತಿದ್ದೇನೆ. ಆ ವೇಳೆ ಮೋದಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
ಪ್ರಧಾನಿ ಮೋದಿ ಜತೆಗಿನ ಭೇಟಿ ಸಂದರ್ಭದಲ್ಲಿ ಏನಾದರೂ ನಿರ್ದಿಷ್ಟ ವಿಷಯ ಪ್ರಸ್ತಾಪವಾಗಬಹುದೇ ಎಂಬ ಪ್ರಶ್ನೆಗೆ, ಯಾವುದೇ ಅಜೆಂಡಾ ಇಲ್ಲ. ಅವರು ಚಹಾ ಜತೆ ಚರ್ಚೆಗೆ ಕರೆದಿದ್ದಾರೆ, ನಾನು ಹೋಗುತ್ತಿದ್ದೇನೆ ಅಷ್ಟೇ. ಯಾವುದೇ ಪೂರ್ವನಿರ್ಧಾರಿತ ವಿಷಯಗಳಿಲ್ಲ. ನಾನೇನೂ ಪರಿಣತನಲ್ಲ, ಆದರೂ ಹತ್ತು ತಿಂಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ನನ್ನ ಅನುಭವವನ್ನು ಅವರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಉತ್ತರಿಸಿದರು.
ಈ ಮಾತುಕತೆಯ ಉದ್ದೇಶ ಏನಿರಬಹುದು ಎಂಬ ಪ್ರಶ್ನೆಗೆ, ಮಾಜಿ ಪ್ರಧಾನಿಗಳ ಜತೆ ಸ್ವಲ್ಪ ಕಾಲ ಕಳೆಯುವ ಇರಾದೆ ಇರಬಹುದು ಎಂದಷ್ಟೇ ಗೌಡರು ಮಾರ್ಮಿಕವಾಗಿ ತಿಳಿಸಿದ್ದಾರೆ.