ಪಂಜಾಬ್ : ಭಾರತದ ಗಡಿ ನುಸುಳಿ ಬಂದು ಭಾರತದ ನೆಲದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸದಾ ಹವಣಿಸುತ್ತಿರುವ ಪಾಕಿಸ್ತಾನಿಗಳ ಬಗ್ಗೆ ಕೇಳಿದ್ದೀರಿ. ಈಗ ಅನುಮತಿ ಇಲ್ಲದೆ ಭಾರತದ ಗಡಿ ದಾಟಿ ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಪಾರಿವಾಳವೊಂದು ಸುದ್ದಿ ಮಾಡುತ್ತಿದೆ!
ಹೌದು, ಪರಿವಾಳವೊಂದು ಪಾಕಿಸ್ತಾನದಿಂದ ಭಾರತದ ಗಡಿ ದಾಟಿ ಹಾರಿ ಬಂದು ಈಗ ಪಂಜಾಬ್ ಪೊಲೀಸರ ಅತಿಥಿಯಾಗಿದೆ. ಪಂಜಾಬ್ ನ ಪಠಾಣ್ ಕೋಟ್ ಎಂಬಲ್ಲಿ ಪಾಕಿಸ್ತಾನದಿಂಡ ಬಂದ ಈ ಹಕ್ಕಿಯನ್ನು ಭಾರತ-ಪಾಕಿಸ್ತಾನ್ ಗಡಿ ಪ್ರದೇಶದಲ್ಲಿರುವ ಮನ್ವಾನ್ ಹೞಯ ನಿವಾಸಿ ರಮೇಶ್ ಕುಮಾರ್ ಎಂಬವರು ಬುಧವಾರ ತನ್ನ ಮನೆಯ ಮೇಲೆ ಹಿಡಿದಿದ್ದಾರೆ.
ಬಿಳಿ ಬಣ್ಣದ ಈ ಪಾರಿವಾಳದ ಮೇಲೆ ಪಕಿಸ್ತಾನದ ಮೊಹರು ಕಂಡುಬಂದಿದೆ ಮತ್ತು ಉರ್ದು ಭಾಷೆಯಲ್ಲಿ 'ತೆಹ್ಸಿಲ್ ಶಕಾರ್ ಗರ್, ನರೋವಾಲ್ ಜಿಲ್ಲೆ' ಎಂದು ಮುದ್ರಿಸಲಾಗಿದೆ. ಪಾಕಿಸ್ತಾನದ ಮೊಹರು, ಬರಹದಿಂದ ಶಂಕೆ ಪಟ್ಟು ರಮೇಶ್ ಈ ಹಕ್ಕಿಯನ್ನು ಸಮೀಪದ ಬಿಮಾಲ್ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
ಪಠಾಣ್ ಕೋಟ್ ನ ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ರಾಕೇಶ್ ಕೌಶಲ್, ಈ ಹಕ್ಕಿ ನಿಜವಾಗಿಯೂ ಪಾಕಿಸ್ತಾನದಿಂದ ಭಾರತದ ನೆಲದ ಮೇಲೆ ಇಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. 'ಪಾರಿವಾಳದ ಮೇಲೆ ಏನಾದರೂ ಸಂದೇಶ ಬರೆಯಲಾಗಿದೆಯೆ' ಎಂಬ ಪ್ರಶ್ನೆಗೆ ಅವರು, ಅಂಥದ್ದೇನೂ ಕಂಡುಬಂದಿಲ್ಲ ಎಂದು ಉತ್ತರಿಸಿದ್ದಾರೆ.
'ಏನಿದ್ದರೂ, ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ' ಎಂದು ರಾಕೇಶ್ ಹೇಳಿದ್ದಾರೆ. ಅಲ್ಲದೆ, 'ಸೂಕ್ಷ್ಮವಾದ ಗಡಿ ಪ್ರದೇಶದಲ್ಲಿರುವ ಪಾರಿವಾಳ ಪ್ರೇಮಿಗಳು ಪಾಕಿಸ್ತಾನದ ಹಕ್ಕಿಗಳನ್ನು ಭಾರತದ ಪಾರಿವಾಳಗಳಿಂದ ಪ್ರತ್ಯೇಕವಾಗಿ ಸುಲಭವಾಗಿ ಗುರಿತಿಸಬಹುದಾಗಿದೆ ಎನ್ನುತ್ತಾರೆ' ಎಂದು ಹೇಳಿದರು.
ಅಂತೂ ತನಿಖೆ ಮುಗಿಯುವವರೆಗೆ ಈ ನತದೃಷ್ಟ ಪಾರಿವಾಳ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸಬೇಕಾಗಿದೆ!.