ಬೆಂಗಳೂರು : ಪೊಲೀಸ್ ಸಿಬ್ಬಂದಿಗಳ ಸಾಮೂಹಿಕ ಪ್ರತಿಭಟನೆಗೆ ರಾಜ್ಯಾಧ್ಯಂತ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ಪೊಲೀಸರ ಮನವೊಲಿಕೆಗೆ ಮಣಿದಿರುವ ಪೊಲೀಸ್ ಸಿಬ್ಬಂದಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪೊಲೀಸರು ಕರ್ತವ್ಯಕ್ಕೆ ಹಾಜರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿಭಟನೆ ನಡೆಸುವ ಯಾವುದೇ ವಾತಾವರಣಗಳು ಕಂಡುಬಂದಿಲ್ಲ ಎನ್ನಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹ ರಕ್ಷಕದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಪ್ರತಿಭಟನೆ ಕುರಿತಂತೆಪ್ರತಿಕ್ರಿಯೆ ನೀಡಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್, ರಾಜ್ಯದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯುವುದಿಲ್ಲ. ಪೊಲೀಸರ ಪ್ರತಿಭಟನೆ ಹಾಗೂ ಸಮಸ್ಯೆ ವಿಚಾರ ನಮ್ಮ ಮನೆಯ ವಿಚಾರವಾಗಿದ್ದು, ನಮ್ಮ ಮನೆಯ ಸಮಸ್ಯೆಯನ್ನು ನಾವು ಬಗೆಹರಿಸಿಕೊಂಡಿದ್ದೇವೆ. ಇದೀಗ ಶೇ.100ಕ್ಕೆ ನೂರರಷ್ಟು ಪೊಲೀಸರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಹೇಳಿದರು.