ನವದೆಹಲಿ : ಕೇಂದ್ರದಲ್ಲಿರುವುದು ಏಕವ್ಯಕ್ತಿಯ ಸರ್ಕಾರ ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಯುಪಿಎ ಅವಧಿಯಲ್ಲಿ ಪ್ರಧಾನಿ ಕಾರ್ಯಾಲಯದ ಮೇಲೆ ಅಧಿಕಾರ ಚಲಾಯಿಸುತ್ತಿದ್ದ ಅಸಾಂವಿಧಾನಿಕ ಶಕ್ತಿ ಕೇಂದ್ರ ಸೋನಿಯಾ ಆಗಿದ್ದರು ಎಂದು ಕಿಡಿಕಾರಿದ್ದಾರೆ.
ನಾವು ಸಂವಿಧಾನ ಮಾರ್ಗದಲ್ಲಿ ನಡೆಯುತ್ತಿದ್ದೇವೆ, ಸಂವಿಧಾನಕ್ಕೆ ಅತೀತರಾದ ವ್ಯಕ್ತಿಗಳ ಮಾತುಗಳನ್ನು ಕೇಳುತ್ತಿಲ್ಲ ಎಂಬುದು ನಮ್ಮ ವಿರುದ್ಧದ ಆರೋಪವಾದರೆ, ತಪ್ಪಿತಸ್ಥನಾಗಲು ನಾನು ಸಿದ್ಧ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಮೋದಿ ಅವರದ್ದು ಏಕವ್ಯಕ್ತಿಯ ಸರ್ಕಾರ ಎನ್ನುತ್ತಿರುವ ಸೋನಿಯಾ ಅವರು ಬಹುಶಃ ಹಿಂದೆ ನೈಜ ಅಧಿಕಾರ ಹೊಂದಿದ್ದ ಸಂವಿಧಾನೇತರ ಶಕ್ತಿ ಕೇಂದ್ರದ ಬಗ್ಗೆ ಮಾತನಾಡುತ್ತಿರಬಹುದು ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪದೇ ಪದೇ ವ್ಯಕ್ತಪಡಿಸುತ್ತಿರುವ "ಸೂಟು ಬೂಟಿನ ಸರ್ಕಾರ' ಟೀಕೆಗೂ ತಿರುಗೇಟು ನೀಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲನ್ನು ಒಂದು ವರ್ಷ ಕಳೆದರೂ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಅಧಿಕಾರವನ್ನೆಲ್ಲಾ ಪ್ರಧಾನಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎಂಬ ಆರೋಪ ನಿರಾಕರಿಸಿರುವ ಅವರು, ಸಚಿವರ ಅಧಿಕಾರವನ್ನು ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ನಿರ್ಧಾರ ಕೈಗೊಳ್ಳಲು ಪ್ರಧಾನಿ ಅಥವಾ ಸಂಪುಟದ ಬಳಿಗೆ ಸಚಿವರು ಬರುವುದು ತಪ್ಪಿದೆ. ಸಚಿವರೇ ನೇರವಾಗಿ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದರು.
ವಿವಾದಿತ ಭೂಸ್ವಾಧೀನ ವಿಧೇಯಕ ಕುರಿತೂ ಮಾತನಾಡಿದ ಅವರು, 120 ವರ್ಷಗಳಷ್ಟು ಹಳೆಯ ಭೂಸ್ವಾಧೀನ ಕಾಯ್ದೆಗೆ ಹಿಂದಿನ ಸರ್ಕಾರ 120 ನಿಮಿಷಗಳಷ್ಟೂ ಚರ್ಚೆ ನಡೆಸದೆ ತಿದ್ದುಪಡಿ ಅಂಗೀಕರಿಸಿತು. ಆ ಮಸೂದೆ ರೈತರ ಪರವಾಗಿರುತ್ತದೆ ಎಂದು ಭಾವಿಸಿ ನಾವೂ ಬೆಂಬಲ ನೀಡಿದ್ದೆವು. ತದನಂತರದಲ್ಲಿ ರಾಜ್ಯ ಸರ್ಕಾರಗಳಿಂದ ಸಾಕಷ್ಟು ದೂರುಗಳು ಕೇಳಿಬಂದವು. ಹೀಗಾಗಿ ಅದನ್ನು ಸರಿಪಡಿಸಲು ತಿದ್ದುಪಡಿ ಮಸೂದೆ ತಂದಿದ್ದೇವೆ. ಆಗಿರುವ ತಪ್ಪನ್ನು ಸರಿಪಡಿಸುವ ವಿಚಾರದಲ್ಲಿ ಯಾರೂ ಅಹಂಕಾರದಿಂದ ವರ್ತಿಸಬಾರದು. ರಾಜಕೀಯ ಪ್ರೇರಿತ ಕನ್ನಡಕ ಧರಿಸದೇ ಯಾರೇ ಆಗಲಿ ಈ ತಿದ್ದುಪಡಿಗಳನ್ನು ಗಮನಿಸಿದರೆ ನಮಗೆ ಸಂಪೂರ್ಣ ಅಂಕ ನೀಡುತ್ತಾರೆ ಎಂದು ಹೇಳಿದರು.