ಮಥುರಾ : ಕೇಂದ್ರ ಎನ್.ಡಿ.ಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಭಾನ್ ನಲ್ಲಿ ಬಿಜೆಪಿ ರ್ಯಾಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ನಾಗ್ಲಾ ಚಂದ್ರಬಾನ್ ನಲ್ಲಿ ಪ್ರಧಾನಿ ಮೋದಿ ಯವರಿಗೆ 365 ಕಮಲದ ಹೂಗಳಿಂದ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಥುರಾ ಜನತೆಯ ಕಣಕಣದಲ್ಲೂ ಶ್ರೀಕೃಷ್ಣನಿದ್ದಾನೆ. ಈ ಪುಟ್ಟಗ್ರಾಮದಲ್ಲಿ ಪಂಡೀತ್ ದೀನ್ ದಯಾಳ್ ಜನಿಸಿದ್ದರು. ಶ್ರೀ ಕೃಷ್ಣ ಕರ್ಮಯೋಗವನ್ನು ಭೋಧಿಸಿದ್ದ ಮಹಾತ್ಮ. ಅದೇ ಸಂದೇಶವನ್ನು ದೀನ್ ದಯಾಳ್ ಅಳವಡಿಸಿಕೊಂಡಿದ್ದರು. ಅವರು ಕೂಡ ಕರ್ಮಯೋಗಿಯಾಗಿದ್ದರು. ಅವರು ನಮಗೆ ಸದಾ ಕರ್ತವ್ಯ ನಿಷ್ಠೆಯನ್ನು ಹೇಳಿಕೊಟ್ಟರು ಎಂದರು.
ಭಾರತೀಯ ರಾಜಕಾರಣದಲ್ಲಿ ಮೂರು ಮಹಾಪುರುಷರ ಚಿಂತನೆ ಅಡಗಿದೆ. ಅವು ಗಾಂಧಿ, ಲೋಹಿಯಾ, ದೀನ್ ದಯಾಳ್ ಚಿಂತನೆಗಳು. ಮೂಲಕ ರಾಜಕಾರಣ ನಡೆಯುತ್ತಿದೆ. ಬಡವರು, ರೈತರು, ಕಾರ್ಮಿಕರು, ಜನಸಾಮಾನ್ಯರ ಅಭಿವೃದ್ಧಿಗೆ ಮೂವರ ಚಿಂತನೆಗಳು ಸಹಾಯಕಾರಿಯಾಗಿದೆ. ಇವರ ಚಿಂತನೆಗಳನ್ನು ನಮ್ಮ ಸರ್ಕಾರ ಅಳವಡಿಸಿಕೊಂಡಿದೆ ಎಂದು ಹೇಳಿದರು.
ನಾನು ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ. ದೇಶವನ್ನು ದೋಚುವುದನ್ನು ನಿಲ್ಲಿಸಿದೇನೆ. ಹಿಂದಿನ ಸರ್ಕಾರ ದೇಶವನ್ನು ಲೂಟಿ ಮಾಡುತ್ತಿತ್ತು. ಇಂದು ಸರ್ಕಾರದ ಚಿಂತನೆಗಳಲ್ಲಿ ಬದಲಾವಣೆ ಆರಂಭವಾಗಿದೆ. ಇಂದು ದೇಶದ ಎಲ್ಲೆಡೆ ಉತ್ಸಾಹ, ಹೊಸತನಕಾಣುತ್ತಿದೆ. ಕೇವಲ ಒಂದು ವರ್ಷದ ಹಿಂದೆ ದೇಶದ ಸ್ಥಿತಿ ಹೇಗಿತ್ತು? ದಿನಕ್ಕೊಂದು ಹಗರಣ ಬಯಲಾಗುತ್ತಿತ್ತು, ದೇಶದ ಜನತೆ ತಲೆ ತಗ್ಗಿಸುವಂತಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಇವೆಲ್ಲ ಬದಲಾಗಿದೆ ಎಂದು ತಿಳಿಸಿದರು.
ಕಳೆದ ಒಂದು ವರ್ಷದಿಂದ ಒಂದೂ ಹಗರಣಗಳಾಗಿಲ್ಲ. ಈ ಎಲ್ಲಾ ಬದಲಾವಾಣೆ ತಂದಿದ್ದು, ನರೇಂದ್ರ ಮೋದಿಯಲ್ಲ. ಈ ಬದಲಾವಣೆಯ ಹರಿಕಾರರು ನೀವು, ಈ ದೇಶದ ಜನರು. 365 ದಿನಗಳಲ್ಲಿ ಒಳ್ಳೆಯ ಕೆಲಸಗಳು ಆರಂಭವಾಗಿದೆ. ದೇಶವನ್ನು ಲೂಟಿ ಮಾಡಿದವರೊಇಗೆ ಕೆಟ್ಟದಿನಗಳು ಆರಂಭವಾಗಿದೆ ಎಂದರು.
ಈ ವರೆಗೆ 29 ಗಣಿಗಳನ್ನು ಹರಾಜು ಹಾಕಲಾಗಿದೆ. ಸರ್ಕಾರದ ಬೊಕ್ಕಸಕ್ಕೆ 3 ಲಕ್ಷ ಕೋಟಿ ಹಣ ಬಂದಿದೆ. ಈ ಹಣವನ್ನು ನಾವು ಗಿರಿಜನರ ಅಭಿವೃದ್ಧಿಗೆ ಬಳಸುತ್ತಿದ್ದೇವೆ ಎಂದು ತಿಳಿಸಿದರು.