ಬೆಂಗಳೂರು : ರಾಜ್ಯದಲ್ಲಿ ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ರಕ್ಷಿಸಲು ಸರ್ಕಾರ ಹೊರಟಿಲ್ಲ. ಜಾತಿ ಹೆಸರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಸಿದ್ದರಾಮಯ್ಯನೇ, ಕುಮಾರಸ್ವಾಮಿಯಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಹಗರಣದದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ರಾಜ್ಯಪಾಲರು ವರದಿ ಕೇಳಿದ್ದು, ಸಂಜೆ ವೇಳೆಗೆ ವರದಿ ಸಲ್ಲಿಸುತ್ತೇನೆ. ಚಂದ್ರಕಾಂತ್ ಯಾರೆಂಬುದು ನನಗೆ ಗೊತ್ತಿಲ್ಲ, ಅವರು ಕುರುಬರೇ ಇರಬಹುದು ಆದರೆ ಜಾತಿ ಹೆಸರಲ್ಲಿ ಯಾರನ್ನೂ ರಕ್ಷಣೆ ಮಾಡಿಲ್ಲ. ಕುರುಬರೆಲ್ಲ ಸಿದ್ದರಾಮಯ್ಯನವರ ಸಂಬಂಧಿಕರಲ್ಲ. ತಪ್ಪು ಮಾಡಿದರೆ ನಮ್ಮ ಅಜ್ಜನನ್ನೂ ಬಂಧಿಸದೇ ಬಿಡಲ್ಲ ಎಂದು ಗುಡುಗಿದರು.
ಹೆಚ್ ಡಿಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ದನಮೇಯಿಸುವ ಸಂಸ್ಕೃತಿ ನಮ್ಮದಲ್ಲ. ಮಾಜಿ ಸಿಎಂಗೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲ. ಸಿಐಡಿ ಮಧ್ಯಂತರ ವರದಿಯಲ್ಲಿ ಅಲೋಕ್ ಕುಮಾರ್ ಹೆಸರಿತ್ತು. ಹೀಗಾಗಿ ಅವರನ್ನು ಅಮಾನತು ಮಾಡಿದ್ದೇವೆ.ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಒಂದಂಕಿ ಲಾಟರಿ ಹಗರಣದಲ್ಲಿ ಸಿದ್ದರಾಮಯ್ಯನವರು ಚಂದ್ರಕಾಂತ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಅವರು ಕುರುಬರಾಗಿದ್ದರಿಂದ ಹಾಗೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಅಲ್ಲದೇ ಪ್ರಕರಣ ಇಷ್ಟು ಗಂಭೀರವಾಗಿದ್ದರೂ ಸಿಎಂ ಕ್ರಮಕೈಗೊಳ್ಳದೇ ಸಿದ್ದರಾಮಯ್ಯ ದನ ಮೇಯಿಸುತ್ತಿದ್ರಾ ಎಂದು ಪ್ರಶ್ನಿಸಿದ್ದರು.