ಬೆಂಗಳೂರು : ಅಕ್ರಮ ಲಾಟರಿ ಮಾರಾಟ ದಂಧೆ ರೂವಾರಿ ಪಾರಿರಾಜನ್ ಜತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ ಬೆಂಗಳೂರು ಕಾನೂನು ಸುವ್ಯವಸ್ಥೆ ವಿಭಾಗ (ಪಶ್ಚಿಮ) ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಈ ಹಿಂದೆಯೇ ಅಮಾನತುಗೊಂಡಿದ್ದ ಅಬಕಾರಿ ಮತ್ತು ಲಾಟರಿ ವಿಚಕ್ಷಣ ದಳದ ಎಸ್.ಪಿ.ಧರಣೇಶ್ ಅವರನ್ನು ಕೂಡ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆದ್ದಾರೆ. ಬೆಳಗ್ಗೆ 11 ಗಂಟೆಗೆ ಸಿಐಡಿ ಕಚೇರಿಗೆ ಬಂದ ಅಲೋಕ್ ಕುಮಾರ್ ಹಾಗೂ ಧರಣೇಶ್ ಅವರನ್ನು ಸುಮಾರು 4 ಗಂಟೆಗಳ ಕಾಲ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದರೆಂದು ತಿಳಿದುಬಂದಿದೆ.
ಅಕ್ರಮ ಲಾಟರಿ ಕಿಂಗ್ಪಿನ್ ಪಾರಿರಾಜನ್ ಅವರ ಜತೆಗಿನ ಸಂಬಂಧ, ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ, ಪಾರಿರಾಜನ್ ಅವರನ್ನು ಯಾರು ಪರಿಚಯ ಮಾಡಿಕೊಟ್ಟರು ಎಂಬಿತ್ಯಾದಿ ವಿಷಯಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಪಾರಿರಾಜನ್ ಜತೆ ಅಲೋಕ್ ಕುಮಾರ್ ಅವರು ತಮ್ಮ ಮೊಬೈಲ್ ದೂರವಾಣಿ ಹಾಗೂ ಕಚೇರಿ ದೂರವಾಣಿಯಿಂದ ಕರೆ ಮಾಡಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದ್ದ ಹಿನ್ನೆಲೆ ಮತ್ತು ಅಲೋಕ್ ಕುಮಾರ್ ಅವರೇ ಸ್ವತಃ ಪಾರಿರಾಜನ್ ಅವರು ನನ್ನ ಹಿತೈಷಿ ಎಂದು ಹೇಳಿರುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅಲೋಕ್ಕುಮಾರ್ ಅವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.
ಈ ದಂಧೆಯಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮ ಲಾಟರಿ ದಂಧೆಯಲ್ಲಿ ಅಲೋಕ್ ಕುಮಾರ್ ಅವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅಲೋಕ್ಕುಮಾರ್ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸರ್ಕಾರವನ್ನು ತೀವ್ರ ಮುಜುಗರಕ್ಕೀಡುಮಾಡಿತ್ತು.