ಮಥುರಾ : ಗ್ರೇಟರ್ ನೋಯ್ಡಾವನ್ನು ಮಥುರಾ ಪಟ್ಟಣಕ್ಕೆ ಸಂಪರ್ಕಿಸುವ ಆರು ಪಥಗಳ ಯಮುನಾ ಎಕ್ಸ್ ಪ್ರೆಸ್ ವೇ ಮುಂಜಾನೆ ನೂತನ ಇತಿಹಾಸಕ್ಕೆ ಸಾಕ್ಷಿಯಾಯಿತು. ತುರ್ತು ಸಂದರ್ಭಗಳಲ್ಲಿ ಹಾರಾಡುತ್ತಿರುವ ವಿಮಾನಗಳನ್ನು ರಸ್ತೆಯಲ್ಲಿ ಇಳಿಸಲು ಸಾಧ್ಯವೇ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಭಾರತೀಯ ವಾಯುಸೇನೆಯು ತನ್ನ ಮಿರಾಜ್ ವಿಮಾನವನ್ನು ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ ಇಂತಹ ಪ್ರಯೋಗ ನಡೆದಿರುವುದು ಇದೇ ಮೊದಲಾಗಿದ್ದು, ಪ್ರಥಮ ಪ್ರಯತ್ನದಲ್ಲಿಯೇ ಭಾರತೀಯ ವಾಯುಸೇನೆಗೆ ಜಯ ಲಭಿಸಿದಂತಾಗಿದೆ.
ವರದಿಗಳ ಪ್ರಕಾರ ಗುರುವಾರ ಬೆಳಿಗ್ಗೆ ಯುಮುನಾ ಎಕ್ಸ್ ಪ್ರೆಸ್ ವೇನಲ್ಲಿ ಮಥುರಾಗೆ ಸಾಗುವ ಕಡೆ ವಿಮಾನವು ಎರಡು ಬಾರಿ ಇಳಿದಿದ್ದು ಇಲ್ಲಿಯೇ ಮೇ 25ರಂದು ಪ್ರದಾನಿ ನರೇಂದ್ರ ಮೋದಿ ಅವರು ಕೇಂದ್ರ ಎನ್.ಡಿ.ಎ ಸರ್ಕಾರದ ಮೊದಲ ವರ್ಷಾಚರಣೆ ಸಂಭ್ರಮದ ದೇಶವ್ಯಾಪಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.
ಅನಿರೀಕ್ಷಿತವಾಗಿ ವಿಮಾನವು ಹೆದ್ದಾರಿಯಲ್ಲಿ ಇಳಿದ ಕಾರಣದಿಂದ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಆದರೆ ಮತ್ತೂಂದು ಮೂಲಗಳ ಪ್ರಕಾರ ಪ್ರಾರಂಭದಲ್ಲಿ ರಸ್ತೆಗೆ ಮೆಲ್ಮಟ್ಟದಲ್ಲಿ ಹಾರಾಡಿದ ವಿಮಾನವು ಬಳಿಕ ಕೆಲವು ನಿಮಿಷಗಳವರೆಗೆ ಮಾತ್ರವೇ ರಸ್ತೆಯ ಮೇಲೆ ಇಳಿಯಿತು.
ಏನೇ ಆದರೂ, ಈ ಪ್ರಯೋಗವು ಭಾರತೀಯ ವಾಯು ಸೇನೆಗೆ ತುರ್ತು ಸಂದರ್ಭಗಳಲ್ಲಿ ರಸ್ತೆಯ ಮೇಲೆ ವಿಮಾನವನ್ನು ಇಳಿಸುವ ಪ್ರಯತ್ನಕ್ಕೆ ಹೊಸ ಶಕ್ತಿಯನ್ನು ನೀಡಿದಂತಾಗಿದೆ.