ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಖ್ಯಕಾರ್ಯದರ್ಶಿ ನೇಮಕ ಸಂಬಂಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪರಾಜ್ಯಪಾಲ ನಜೀಬ್ ಜಂಗ್ ನಡುವೆ ಜಂಗೀಕುಸ್ತಿ ತಾರಕಕ್ಕೇರಿರುವ ನಡುವೆಯೇ ಸಂವಿಧಾನದ ಪ್ರಕಾರ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಗೆ ಇಲ್ಲ ಎಂದು ಮಾಜಿ ಎಎಸ್ ಜಿ(ಅಡಿಷನಲ್ ಸೋಲಿಸಿಟರ್ ಜನರಲ್) ಇಂದಿರಾ ಜೈಸಿಂಗ್ ತಿಳಿಸಿದ್ದಾರೆ.
ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರ ವಿವೇಚನೆಯಿಂದ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಕುಂತಲಾ ಗ್ಯಾಮ್ಲಿನ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಹಂಗಾಮಿ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ಇದು ಗವರ್ನರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ನಡುವೆ ಜಂಗೀಕುಸ್ತಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮಾಜಿ ಎಎಸ್ ಜಿ ಅವರ ಬಳಿ ಕಾನೂನು ಅಭಿಪ್ರಾಯ ನೀಡಲು ಕೇಳಿತ್ತು.
ಶಕುಂತಲಾ ಅವರನ್ನು ಜಂಗ್ ಪ್ರಭಾರ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ಇದನ್ನು ವಿರೋಧಿಸಿದ್ದ ಕೇಜ್ರಿವಾಲ್ ನೇಮಕ ಆದೇಶ ಹೊರಡಿಸಿದ್ದ ಅನಿಂದೋ ಎಂಬ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದರು. ಅಲ್ಲದೇ ಅನಿಂದೋ ಕಚೇರಿಗೆ ಬೀಗ ಹಾಕಿ, ಅವರ ಸ್ಥಾನಕ್ಕೆ ರಾಜೇಂದ್ರ ಎಂಬ ಅಧಿಕಾರಿಯನ್ನು ನೇಮಕ ಮಾಡಿದ್ದರು. ಆದರೆ ರಾಜೇಂದ್ರ ನೇಮಕವನ್ನು ಲೆಫ್ಟಿನೆಂಟ್ ಗವರ್ನರ್ ಜಂಗ್ ತಿರಸ್ಕರಿಸಿದ್ದರು. ಇದರಿಂದ ಜಂಗ್ ಮತ್ತು ಕೇಜ್ರಿವಾಲ್ ನಡುವಿನ ಜಗಳ ತಾರಕಕ್ಕೇರಿತ್ತು.