ಮುಂಬೈ : ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿರುವುದಕ್ಕೆ ಎನ್.ಡಿ.ಎ ಮೈತ್ರಿಕೂಟದ ಶಿವಸೇನೆ ಅಸಮಾಧಾನವ್ಯಕ್ತಪಡಿಸಿದ್ದು, ಚೀನಾ ಎದುರಿಗೆ ಅಪ್ಪಿಕೊಳ್ಳುತ್ತೆ, ಆದರೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುತ್ತೆ. ಇದು ಚೀನಾದ ನೀತಿ ಎಂದು ಕಿಡಿಕಾರಿದೆ.
ಚೀನಾದ ನಡವಳಿಕೆ ಈಗಾಗಲೇ ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸುವ ಚೀನಾ, ಮತ್ತೊಂದೆಡೆ ಚೀನಾ ಭಾರತದ ಭೂಪಟದಲ್ಲಿ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನೇ ಕೈಬಿಟ್ಟಿದೆ. ಇದು ಇಬ್ಬಗೆ ನೀತಿಯಲ್ಲವೇ ಎಂದು ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.
ಚೀನಾ ಸ್ವಾಯತ್ತೆಯ ಟಿವಿ ಚಾನೆಲ್ ಪ್ರದರ್ಶಿಸಿದ ಭಾರತದ ಭೂಪಟದಲ್ಲಿ ಜಮ್ಮು-ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶವೇ ಇಲ್ಲವಾಗಿತ್ತು.
ಹಾಗಾಗಿ ಚೀನಾ ಪ್ರದರ್ಶಿಸುವ ಈ ನಡವಳಿಕೆಯಿಂದ ಭಾರತಕ್ಕೆ ಅಗತ್ಯವಾಗಿ ಮನವರಿಕೆಯಾಗಬೇಕಾಗಿದೆ. ಚೀನಾ ತನ್ನ ಚಾಳಿಯನ್ನು ಬದಲಾಯಿಸಿಕೊಂಡಿಲ್ಲ. ಚೀನಾ ಪ್ರದರ್ಶಿಸಿದ ಭಾರತದ ಭೂಪಟದಲ್ಲಿ ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಶಿವಸೇನೆ ಒತ್ತಾಯಿಸಿದೆ.
ಅರುಣಾಚಲ ಪ್ರದೇಶ ತನ್ನ ಭೂಭಾಗ ಎಂದು ಚೀನಾ ಹೇಳಿಕೊಳ್ಳುತ್ತಿದೆ. ಅಷ್ಟೇ ಅಲ್ಲ ಜಮ್ಮು- ಕಾಶ್ಮೀರದ ವಿಷಯದಲ್ಲೂ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ ಎಂದು ಸಾಮ್ನಾದಲ್ಲಿ ಆರೋಪಿಸಿದೆ.