ಸಿಯೋಲ್ : ಚೀನಾ, ಮಂಗೋಲಿಯಾ ಪ್ರವಾಸದ ಬಳಿಕ ಈಗ ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಏಷ್ಯಾ ರಾಷ್ಟ್ರಗಳಿಗೆ ಕೊರಿಯಾ ಅಭಿವೃದ್ಧಿ ಮಹತ್ವದ್ದು. ಕೊರಿಯಾ ಅಭಿವೃದ್ಧಿಯಿಂದ ಪ್ರಭಾವಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಸಿಯೋಲ್ ನಲ್ಲಿ ಮಾತನಾಡಿದ ಅವರು, ಗುಜರಾತ್ ಸಿಎಂ ಆಗಿದ್ದಾಗ 2007ರಲ್ಲಿ ದಕ್ಷಿಣ ಕೊರಿಯಾಗೆ ಆಗಮಿಸಿದ್ದೆ. ಈ ಭೇಟಿ ಉಭಯದೇಶಗಳ ಸಂಬಂಧವನ್ನು ಇನಷ್ಟು ವೃದ್ಧಿಗೊಳಿಸಲಿದೆ. ಭಾರತದ ಅಭಿವೃದ್ಧಿಯಲ್ಲಿ ಕೊರಿಯಾದ ಮಹತ್ತರ ಪಾತ್ರವಿದೆ. ಈ ಭೇಟಿ ಉಭಯ ದೇಶಗಳ ರಕ್ಷಣಾ ಇಲಾಖೆಗಳ ಉನ್ನತೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ವಿಶ್ವದ ರಾಷ್ಟ್ರಗಳಿಗೆ ಭಾರತದ ಬಗ್ಗೆ ಇದ್ದ ದೃಷ್ಟಿಕೋನ ಬದಲಾಗಿದೆ. 'ಒಂದು ಸಮಯದಲ್ಲಿ ಭಾರತ ದೇಶ ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಭಾವನೆ ಬೇರೆ ದೇಶಗಳಿಗೆ ಇತ್ತು. ಭಾರತೀಯರಿಗೂ ನಾವು ಯಾಕಾದರೂ ಈ ದೇಶದಲ್ಲಿ ಹುಟ್ಟಿದ್ದೇವೆ ಎಂಬ ವಿಷಾದವಿತ್ತು. ಆದರೆ ಈಗ ಆ ಮನೋಭಾವ ಬದಲಾಗಿದೆ. ಭಾರತ ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಮಾರ್ಪಾಡಾಗಿದೆ ಎಂದರು.
ಅವಕಾಶಗಳನ್ನರಸಿ ಹೊರ ದೇಶಗಳಿಗೆ ಹೋದ ಭಾರತೀಯರು ಮತ್ತು ವಿದೇಶೀಯರು ಈಗ ಭಾರತಕ್ಕೇ ಬರಲು ಉತ್ಸುಕರಾಗಿದ್ದಾರೆ ಎಂದರು.
ಭಾರತವನ್ನು ವಿಶ್ವದ ಮುಂದುವರಿದ ರಾಷ್ಟ್ರಗಳ ಸಾಲಿಗೆ ತರುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ಅಭಿವೃದ್ಧಿ ಒಂದೇ ಭಾರತದ ಸಮಸ್ಯೆಗಳಿಗೆ ಪರಿಹಾರ. ಅಭಿವೃದ್ಧಿಯೆಂದರೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವುದು, ಉತ್ತಮ ರಸ್ತೆಗಳನ್ನು ನಿರ್ಮಿಸುವುದೆಂದಲ್ಲ. ಜನರ ಜೀವನ ಮಟ್ಟ ಸುಧಾರಿಸುವುದೇ ಅಭಿವೃದ್ಧಿ ಎಂದರು.
ಮಹಿಳೆಯರಿಗೆ ಮನೆಯಲ್ಲಿ ಶೌಚಗೃಹವಿಲ್ಲದೆ ಹೊರಗೆ ಹೋಗಬೇಕಾಗಿ ಬರುವ ಪರಿಸ್ಥಿತಿ ನಿಜವಾಗಿಯೂ ನಾಚಿಕೆಯ ಸಂಗತಿ. ನಮ್ಮ ದೇಶದ ಅನೇಕ ಮಹಿಳೆಯರಿಗೆ ಈಗಲೂ ಈ ಪರಿಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.
ಭಾರತವನ್ನು ಒಂದು ಉತ್ಪಾದಕ ದೇಶವನ್ನಾಗಿ ಬದಲಾಯಿಸಬೇಕು, ವಿಶ್ವದ ಉತ್ತಮ ತಂತ್ರಜ್ನಾನಗಳು ಭಾರತಕ್ಕೆ ಬರುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ರಕ್ಷಣಾ ಇಲಾಖೆ, ಭದ್ರತೆ,ಹಡಗು ನಿರ್ಮಾಣ ಸೇರಿದಂತೆ ಒಟ್ಟುಏಲು ಒಪ್ಪಂದಗಳಿಗೆ ಉಭಯದೇಶಗಳ ನಾಯಕರು ಸಹಿ ಹಾಕಿವೆ. ಅಲ್ಲದೇ ಭಾರತದಲ್ಲಿ ಬಂಡವಾಳ ಹೂಡುವಂತೆ ಮೋದಿ ದಕ್ಷಿಣ ಕೊರಿಯಾದ ಕಂಪನಿಗಳಿಗೆ ಆಹ್ವಾನ ನೀಡಿದ್ದಾರೆ.