ಬೆಂಗಳೂರು : ಸ್ವಚ್ಛ, ಪಾರದರ್ಶಕ, ಹಗರಣ ಮುಕ್ತ ಸರ್ಕಾರ ನೀಡುತ್ತಿದ್ದೇವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಒಂದಂಕಿ ಲಾಟರಿ ಹಾಗೂ ಮಟ್ಕಾ ದಂಧೆ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬೆಂಗಳೂರು ವರದಿಗಾರರ ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ವ್ಯವಸ್ಥಿತವಾಗಿ ನಡೆಯುತ್ತಿರುವ ಒಂದಂಕಿ ಲಾಟರಿ ಹಾಗೂ ಮಟ್ಕಾ ದಂಧೆಯನ್ನು ಸಿಬಿಐಗೆ ವಹಿಸಿದರೆ ನಾನು ಎಲ್ಲಾ ದಾಖಲೆಗಳನ್ನು ಕೊಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ಈ ದಂಧೆಯ ಹಿಂದೆ ರಾಜನ್ ಮತ್ತು ರೀತು ಎಂಬ ಹೆಸರು ಕೇಳಿ ಬಂದಿದೆ. ಅವ್ಯಾಹತವಾಗಿ ದಂಧೆ ನಡೆಯುತ್ತಿದೆ. ಆದರೆ ಇತ್ತೀಚೆಗೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಲಾಟರಿ ಜಾಗೃತದಳ ರದ್ದುಪಡಿಸುವುದಾಗಿ ಹೇಳಿಕೆ ನೀಡಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.ಹಗರಣ ಮುಕ್ತ ಸರ್ಕಾರ ಎಂದು ಘೋಷಿಸಿಕೊಳ್ಳುವವರು ಇದನ್ನು ತಾಕತ್ತಿದ್ದರೆ, ಸಿಬಿಐಗೆ ವಹಿಸಲಿ ಎಂದು ಹೇಳಿದರು.
ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಮೈಸೂರಿನಲ್ಲೇ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ಸಾಗಿದೆ. ಇದರ ನಿಯಂತ್ರಣಕ್ಕೆ ಏನು ಕ್ರಮಕೈಗೊಂಡಿದ್ದೀರಿ? ಎಂದ ಅವರು, ಚೆಕ್ ಪೋಸ್ಟ್ಗಳಲ್ಲಿ ಲಾರಿಗಳನ್ನು ತಡೆಹಿಡಿದಾಗ ಅದನ್ನು ಬಿಟ್ಟುಕೊಡಲು ಶಾಸಕರಿಂದಲೇ ಸೂಚನೆ ರವಾನೆಯಾಗುತ್ತದೆ. ಇದು ಭ್ರಷ್ಟಾಚಾರ ಮುಕ್ತ ಹೇಗಾದೀತು ಎಂದು ಹರಿಹಾಯ್ದರು. ಜನಪರ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿರುವವರು ಜನರ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಒತ್ತು ಕೊಡುತ್ತಿಲ್ಲ. ವಿರೋಧ ಪಕ್ಷಗಳನ್ನು ಟೀಕಿಸುವುದಕ್ಕಾಗಿಯೇ ಸಮಯ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ವಗದಾಳಿ ನಡೆಸಿದರು.
ಅಹಿಂದಾ ಪರವಾಗಿದ್ದೇನೆ. ಇದರಲ್ಲಿ ಯಾವುದೇ ಮುಜುಗರವಿಲ್ಲ ಎಂದು ಹೇಳಿಕೊಂಡಿದ್ದ ಮುಖ್ಯಮಂತ್ರಿಗಳು ಅಹಿಂದಾ ವರ್ಗದ ಅಭಿವೃದ್ಧಿಗೆ ಎಷ್ಟು ಹಣ ನೀಡಿದ್ದೀರಿ. ಕೇವಲ ಪ್ರಚಾರಕ್ಕೆ ಹೇಳಿಕೊಳ್ಳುತ್ತಿದ್ದೀರಾ ಎಂದು ವ್ಯಂಗ್ಯವಾಡಿದರು.
ಎಸ್ಸಿ-ಎಸ್ಟಿ ಅನುದಾನ ಬಳಕೆ ಕಾಯ್ದೆ ಜಾರಿಗೊಳಿಸಿ ಸಮಾಜ ಕಲ್ಯಾಣ ಇಲಾಖೆಯ 15,800 ಕೋಟಿ ರೂ.ಗಳಲ್ಲಿ ಇದುವರೆಗೆ ಎಷ್ಟು ಖರ್ಚಾಗಿದೆ ಎಂದ ಅವರು, ಎರಡು ವರ್ಷ ಪೂರೈಸುತ್ತಿರುವ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಎಷ್ಟು ಪ್ರಯೋಜನವಾಗಿದೆ ಎಂಬುದು ತಿಳಿದುಬಂದಿಲ್ಲ. ಬೋರ್ವೆಲ್ ಕೊರೆಯುವ ಗುತ್ತಿಗೆದಾರರಿಗೆ 700 ಕೋಟಿ ರೂ. ಇನ್ನೂ ಬಾಕಿ ಇದೆ. ಸಾಲ ಮನ್ನಾ ಮಾಡುವುದಾಗಿ ಹೇಳಿಕೊಳ್ಳಲಾಗುತ್ತಿದೆ. ಆದರೆ ಇದನ್ನು ಇವರ ಖಜಾನೆಯಿಂದ ಕೊಟ್ಟಿಲ್ಲ. ನಿಗಮ, ಮಂಡಳಿಗಳಿಂದ ಹೊಂದಾಣಿಕೆ ಮಾಡಿಕೊಂಡ ಹಣದಿಂದ ನೀಡಿದ್ದೀರಿ ಎಂದರು. ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ 5 ವರ್ಷ ಪೂರೈಸುವಷ್ಟರಲ್ಲಿ ಸಾಕಷ್ಟು ಸಾಲ ಮಾಡಿದೆ ಎಂದು ಹೇಳಿಕೊಳ್ಳುತ್ತಾ ಬಂದಿದ್ದೀರಿ. ಆದರೆ ನಿಮ್ಮ ಸರ್ಕಾರ ಎರಡು ಪೂರ್ಣಗೊಳಿಸುವಷ್ಟರಲ್ಲೇ ಅದಕ್ಕಿಂತ ದುಪ್ಪಟ್ಟು ಹಣ ಸಾಲ ಮಾಡಿದೆ. ನಿಮ್ಮ ಸರ್ಕಾರದ ಕೆಲಸಗಳಿಂದ ಜನತೆಗೆ ತೃಪ್ತಿ ತಂದಿಲ್ಲ ಎಂದು ಕಿಡಿಕಾರಿದರು.