ಬೆಂಗಳೂರು : ರಾಜಕೀಯ ಜೀವನದಲ್ಲಿ ನನ್ನಷ್ಟು ನೋವು ತಿಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ. ಇಡೀ ಕರ್ನಾಟಕದಲ್ಲಿ ಅಂತಹವರು ಯಾರೂ ಸಿಗುವುದಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಾನು ದೇಶದ ಪ್ರಧಾನಿಯಾಗಿದ್ದು ಆಕಸ್ಮಿಕ. ಆದರೆ ನಾನು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ನನ್ನ ಟೀಕಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಸಿದ ಮಾತುಕತೆ ಬಗ್ಗೆ ಸ್ಪಷ್ಟನೆ ನೀಡಿದರು.
ನಾನು ಐದು ವರ್ಷಗಳ ಸಂಸದ ಹುದ್ದೆಯನ್ನು ಪೂರೈಸುತ್ತೇನೆ. ಆಗ ನನಗೆ 87 ವರ್ಷ ವಯಸ್ಸಾಗಿರುತ್ತದೆ. ಹಾಗಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪುನರುಚ್ಚರಿಸಿದರು. ನನ್ನನ್ನು 24 ಗಂಟೆಗಳ ಪೊಲಿಟಿಶಿಯನ್ ಅಂತ ಕರೆಯುತ್ತಾರೆ. ನನಗೆ ಈ ಬಿರುದು ಕೊಟ್ಟಿದ್ದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಎಂದು ನೆನಪಿಸಿಕೊಂಡರು.
ಇಂದಿಗೂ ನಾನು ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿಲ್ಲ. ನಾನು ಹೋಗೋ ಮಾರ್ಗ ಸರಿಯಾಗಿದೆ ಎಂದ ಮೇಲೆ ಯಾರಿಗೂ ಹೆದರಬೇಕಾದ ಅಗತ್ಯವಿಲ್ಲ ಎಂದು ದೇವೇಗೌಡರು ಹೇಳಿದರು.