ನವದೆಹಲಿ : ಸರ್ಕಾರಿ ಜಾಹೀರಾತುಗಳಿಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ರೂಪಿಸಿದ್ದು, ಇನ್ನುಮುಂದೆ ಸರ್ಕಾರಿ ಸಂಬಂಧಿ ಮುದ್ರಣ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಯಾವುದೇ ರಾಜಕಾರಣಿಗಳ ಫೋಟೊವನ್ನು ಬಳಸುವಂತಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಸರ್ಕಾರಿ ಜಾಹೀರಾತುಗಳಲ್ಲಿ ಪ್ರಧಾನಮಂತ್ರಿ, ರಾಷ್ಟ್ರಪತಿ ಹಾಗೂ ಮುಖ್ಯನ್ಯಾಯಮೂರ್ತಿ ಫೋಟೊ ಮತರ ಬಳಸಬಹುದು ಎಂದು ಸೂಚನೆ ನೀಡಿರುವ ನ್ಯಾಯಾಲಯ, ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರುಗಳ ಭಾವಚಿತ್ರ ಬಳಸುವಂತಿಲ್ಲ ಎಂದು ಹೇಳಿದೆ. ಆದರೆ ಆ ಜಾಹೀರಾತುಗಳಲ್ಲಿ ತಮ್ಮ ಫೋಟೋ ಇರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಈ ಮೂವರ ಪೂರ್ವಾನುಮತಿ ಅಗತ್ಯ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಸರ್ಕಾರಿ ಜಾಹೀರಾತು ಪ್ರಕಟಣೆಗೆ ಕಠಿಣ ನಿಯಮ ವಿಧಿಸಬೇಕೆಂದು ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ ರಾಜ್ಯ ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿಗಳಾಗಲಿ, ಗವರ್ನರ್, ಯಾವುದೇ ರಾಜ್ಯ ಸಚಿವರ ಪೋಟೊ ಬಳಸುವಂತಿಲ್ಲ. ಅದೇ ರೀತಿ ಕೇಂದ್ರದ ಜಾಹೀರಾತುಗಳಲ್ಲಿ ಪ್ರಧಾನಿ ಹೊರತುಪಡಿಸಿ, ಕೇಂದ್ರ ಸಚಿವರ ಫೋಟೊ ಬಳಸುವಂತಿಲ್ಲ. ಅಲ್ಲದೇ ಜಾಹೀರಾತು ಸಂಬಂಧಿ ಹೊಸ ಮಾರ್ಗಸೂಚಿ ಉಲ್ಲಂಘಿಸದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಸಮಿತಿಯನ್ನು ನೇಮಕ ಮಾಡಿದೆ.