ನವದೆಹಲಿ : ನಾಲ್ವರು ಮಹಿಳಾ ಕ್ರೀಡಾಪಟುಗಳು ಆತ್ಮಹತ್ಯೆಗೆ ಯತ್ನಿಸಿ, ಅವರಲ್ಲಿ ಓರ್ವ ಕ್ರೀಡಾ ಪಟು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.
ತಿರುವನಂತಪುರದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ ನ ಕ್ರೀಡಾ ತರಬೇತುದಾರರು ನೀಡುತ್ತಿದ್ದ ಕಿರುಕುಳದಿಂದ ನೊಂದಿರುವ ಬಾಲಕಿಯರು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ 15 ವರ್ಷದ ಓರ್ವ ಬಾಲಕಿ ಮೃತಪಟ್ಟಿದ್ದರೆ ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ಜಲಕ್ರೀಡಾ ಸೆಂಟರ್ ನಲ್ಲಿ ಈ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದರು. ಅಲ್ಲಿನ ತರಬೇತುದಾರರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದ ನಾಲ್ವರು ಬಾಲಕಿಯರು ಹಣ್ಣಿನ ಜೊತೆ ವಿಷ ಬೆರೆಸಿ ಸೇವಿಸಿದ್ದರು. ಈ ಬಳಿಕ ಪ್ರಜ್ನೆ ತಪ್ಪಿದ ಸ್ಥಿತಿಯಲ್ಲಿ ಕ್ರೀಡಾಪಟುಗಳು ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಹಾಸ್ಟೆಲ್ ವಾರ್ಡನ್ ಮತ್ತು ಸಹಾಯಕ ಆಸ್ಪತ್ರೆಗೆ ದಾಖಲಿಸಿದ್ದರು.
ಆತ್ಮಹತ್ಯೆಗೆ ಯತ್ನಿಸಿ ಉಳಿದಿರುವ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆಯೇ ಕ್ರೀಡಾ ಸಚಿವಾಲಯ ತನಿಖೆ ನಡೆಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಎಸ್.ಎ.ಐ ನ ಡಿ.ಜಿ. ಶ್ರೀನಿವಾಸ್ ಅವರು ಕೇರಳಕ್ಕೆ ಭೇಟಿ ನೀಡಿದ್ದು ಘಟನೆ ಬಗ್ಗೆ ಸಂಪೂರ್ಣ ವಿವರ ಪಡೆದಿದ್ದಾರೆ.
ಕೇರಳದಲ್ಲಿ ಘಟನೆಯಿಂದ ತುಂಬಾ ನೋವಾಗಿದೆ. ಮೃತ ಬಾಲಕಿ ಪ್ರಾಮಾಣಿಕ ಕ್ರೀಡಾಪಟುವಾಗಿದ್ದಳು, ಆಕೆಯ ನಿಧನ ಕ್ರೀಡಾ ಕ್ಷೇತ್ರಕ್ಕೆ ನಷ್ಟ ಉಂಟುಮಾಡಿದೆ ಎಂದಿರುವ ಶ್ರೀನಿವಾಸ, ಯುವ ಪ್ರತಿಭೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.