ಬೆಂಗಳೂರು : ರಾಷ್ಟ್ರಕವಿ ಸೇರಿದಂತೆ ಯಾವುದೇ ಪ್ರಶಸ್ತಿ ಬಿರುದಾವಳಿಗಳನ್ನು ನೀಡುವ ಅರಸೊತ್ತಿಗೆ ಸಂಸ್ಕೃತಿ ಕೊನೆಯಾಗಬೇಕು ಎಂದು ರಾಷ್ಟ್ರಕವಿ ಪ್ರಶಸ್ತಿ ಆಯ್ಕೆ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕೋ.ಚನ್ನಬಸಪ್ಪ ಅವರ ನೇತೃತ್ವದ ಆಯ್ಕೆ ಸಮಿತಿ ರಾಜ್ಯ ಸರ್ಕಾರಕ್ಕೆ 16 ಪುಟಗಳ ವರದಿ ಸಲ್ಲಿಸಿದ್ದು, ಒಂದು ರಾಜ್ಯ ಸರ್ಕಾರ ಇಡೀ ರಾಷ್ಟ್ರಕ್ಕೆ ಅನ್ವಯಿಸುವ ರಾಷ್ಟ್ರಕವಿ ಅಬಿಧಾನ ಪ್ರದಾನ ಮಾಡುವುದು ಉಚಿತವಾಗಿ ಕಾಣುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಭಾರತ ಸಂವಿಧಾನ ಜಾರಿಯಾದ ಮೇಲೆ ರಾಷ್ಟ್ರಕವಿ ಅಬಿಧಾನ, ಇತ್ಯಾದಿ ಪುರಸ್ಕಾರಗಳನ್ನು ಗಣತಂತ್ರ ರಾಜ್ಯದಲ್ಲಿ ನೀಡಬಾರದು. ಆದ್ದರಿಂದ ರಾಷ್ಟ್ರಕವಿ ಸ್ಥಾನಕ್ಕೆ ಯಾರನ್ನೂ ಶಿಫಾರಸ್ಸು ಮಾಡುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೋ.ಚನ್ನಬಸಪ್ಪ, 1950 ಜನವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂದ ಮೇಲೆ ಅರಸೊತ್ತಿಗೆ ನಿರ್ಮೂಲನವಾಗಿದೆ. ಅನಂತರ ಯಾವುದೇ ಬಿರುದಾವಳಿಗಳನ್ನು ಕೊಡುವ ಅಗತ್ಯವಿಲ್ಲ. ಹಿಂದೆ ನೀಡಿರುವ ಬಿರುದಾವಳಿಗಳನ್ನು ರದ್ದು ಮಾಡಬೇಕು ಎಂದು 1948ರಲ್ಲಿ ನಿರ್ಧರಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಆಗ ನೆಹರು ಪ್ರಧಾನಿಯಾಗಿದ್ದರು. ಆಗ ಕಾಂಗ್ರೆಸ್ ನಲ್ಲೇ ಕೆಲವರು ಇದನ್ನು ವಿರೋಧಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪುರುಷೋತ್ತಮದಾಸ್ ಟೆಂಡನ್ ಅವರು ಒಳ್ಳೆಯ ಕೆಲಸ ಮಾಡಿದವರನ್ನು ಯಾವ ರೀತಿ ಪುರಸ್ಕರಿಸಬೇಕು ಎಂಬ ಪ್ರಶ್ನೆ ಮುಂದಿಟ್ಟಾಗ ಬಿ.ಎಂ.ರಾವ್ ಅವರ ಸಮಿತಿ ರಚನೆಯಾಗಿತ್ತು. ಸಮಿತಿಯ ಶಿಫಾರಸ್ಸು ಆಧರಿಸಿ ಪ್ರೆಸಿಡೆನ್ಸಿಯ ನೋಟಿಫಿಕೇಷನ್ ಹೊರಡಿಸುವ ಮೂಲಕ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನ ಮುಂತಾದ ಪ್ರಶಸ್ತಿಗಳು ಜಾರಿಗೆ ಬಂದವು. ಸಂವಿದಾನದ ಆರ್ಟಿಕಲ್ 18ರಲ್ಲಿ ಉಳಿದ ಎಲ್ಲಾ ಬಿರುದಾವಳಿಗಳನ್ನು ರದ್ದುಪಡಿಸಲಾಯಿತು. ಆದರೆ, ರಾಜ್ಯ ಸರ್ಕಾರದಲ್ಲಿ ಪದ್ಮಶ್ರೀ ಸರಣಿಯ ಪ್ರಶಸ್ತಿಗಳ ಪದ್ಧತಿ ಜಾರಿಯಲ್ಲಿಲ್ಲ ಎಂದು ತಿಳಿಸಿದರು.