ನವದೆಹಲಿ : ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.
ಸರ್ಕಾರ ಬಡವರು ಹಾಗೂ ರೈತರ ವಿರುದ್ಧವಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಕೇಂದ್ರ ಸಚಿವ ಸಂಪುಟದ ಎಲ್ಲ ಸಚಿವರನ್ನು ದೇಶದ ವಿವಿಧ ಮೂಲೆಗಳಿಗೆ ಅದರಲ್ಲೂ ವಿಶೇಷವಾಗಿ ಹಳ್ಳಿಗಳಿಗೆ ಕಳುಹಿಸಿ ಜನಸಂಪರ್ಕ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮಗಳ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬಡವರ ಪರ ಹಾಗೂ ರೈತಪರ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲಾಗುತ್ತದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮೇ 12ರಿಂದ ಮೇ 30ರವರೆಗೂ ಸ್ವಕ್ಷೇತ್ರ ಹಾಗೂ ಹಳ್ಳಿಗಳಿಗೆ ತೆರಳುವ ಕೇಂದ್ರ ಸಚಿವರು ಜನಸಂಪರ್ಕ ಕಾರ್ಯಕ್ರಮ ನಡೆಸಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪತ್ರಿಕಾಗೋಷ್ಠಿಗಳನ್ನು ನಡೆಸಿ ಸರ್ಕಾರದ ಸಾಧನೆಗಳನ್ನು ವಿವರಿಸಲಿದ್ದಾರೆ. ಸ್ವತಃ ಮೋದಿ ಅವರೂ ದೆಹಲಿಯಿಂದ ಹೊರಗೆ ತೆರಳಿ ಸರ್ಕಾರದ ಸಾಧನೆಯನ್ನು ವಿವರಿಸಲಿದ್ದಾರೆ. ಸ್ವಕ್ಷೇತ್ರ ವಾರಾಣಸಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.
ಒಂದು ವರ್ಷದಲ್ಲಿನ ಸರ್ಕಾರದ ಸಾಧನೆಗಳ ಕುರಿತು ಮೇ 15ರಿಂದ 26ವರೆಗೆ ಸರ್ಕಾರಿ ಸ್ವಾಮ್ಯದ ದೂರದರ್ಶನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ತಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ ಎಂಬ ಗ್ರಾಮೀಣ ಜನರ ಮಾತುಗಳನ್ನು ದೂರದರ್ಶನ ಚಿತ್ರೀಕರಿಸುತ್ತಿದೆ.
ಸರ್ಕಾರದ ಮೊದಲ ವರ್ಷಾಚರಣೆ ನಿಮಿತ್ತ ಯಾವೆಲ್ಲಾ ಕಾರ್ಯಕ್ರಮ ಆಯೋಜಿಸಬೇಕು ಎಂಬುದನ್ನು ಅಂತಿಮಗೊಳಿಸಲು ಸಚಿವ ಅನಂತಕುಮಾರ ಹಾಗೂ ಇತರರು ಸಭೆಗಳನ್ನು ನಡೆಸುತ್ತಿದ್ದಾರೆ.