ಶ್ರೀನಗರ : ಪಾಕಿಸ್ತಾನದ ಧ್ವಜ ಹಾರಿಸುವುದು ಅಪರಾಧವಲ್ಲ ಎಂದು ಪ್ರತ್ಯೇಕತಾವಾದಿ ಪಕ್ಷವಾದ ಹುರಿಯತ್ ಕಾನ್ಫರೆನ್ಸ್ ಈಗ ಹೊಸ ವರಸೆ ಆರಂಭಿಸಿದೆ.
ಇತ್ತೀಚೆಗೆ ಪ್ರತ್ಯೇಕತಾವಾದಿ ನಾಯಕರಾದ ಸಯ್ಯದ್ ಅಲಿ ಶಾ ಗಿಲಾನಿ ಮತ್ತು ಮಸರತ್ ಆಲಂನ ರ್ಯಾಲಿಗಳಲ್ಲಿ ಪಾಕ್ ಧ್ವಜಗಳು ರಾರಾಜಿಸಿದ ಬೆನ್ನಲ್ಲೇ ಹುರಿಯತ್ ಈ ಉದ್ಧಟತನ ಮೆರೆದಿದೆ.
ಅಲ್ಲದೆ, ಪಾಕ್ ಧ್ವಜ ಹಾರಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ರ ಹೇಳಿಕೆ ಹತಾಶೆಯಿಂದ ಕೂಡಿದೆ ಎಂದು ಟೀಕಿಸಿದೆ.
1983ರಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಆದೇಶ ಪಾಸು ಮಾಡಿದ್ದು, ಪಾಕಿಸ್ತಾನಿ ಧ್ವಜ ಹಾರಾಟವು ಯಾವುದೇ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ. ಧ್ವಜ ಹಾರಾಟವು ಯಾವುದೇ ದೇಶದ ವಿರುದ್ಧ ಯುದ್ಧ ಸಾರಿದಂತಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ಹುರಿಯತ್ ವಕ್ತಾರ ಅಯಾಜ್ ಅಕರ್ ಹೇಳಿದ್ದಾನೆ.
ಅರ್ಧಚಂದ್ರಾಕೃತಿ ಮತ್ತು ನಕ್ಷತ್ರವು ಪಾಕಿಸ್ತಾನ ಧ್ವಜದಲ್ಲಿ ಇರುತ್ತವೆ. ಇಸ್ಲಾಂನಲ್ಲಿ ಈ ಸಂಕೇತಗಳು ಸರ್ವೇಸಾಮಾನ್ಯ. ಯಾವಾಗ ಪಾಕಿಸ್ತಾನ ಕ್ರಿಕೆಟ್ ತಂಡ ಜಯಿಸುತ್ತದೋ ಆಗ ಪಟಾಕಿ ಸಿಡಿಸಿ ಪಾಕ್ ಧ್ವಜ ಬೀಸುವುದು ಇಲ್ಲಿ ಸರ್ವೇಸಾಮಾನ್ಯ ಎಂದು ಸಿಎಂ ಸಯೀದ್ ಗೆ ಗೊತ್ತಿಲ್ಲವೆ ಎಂದು ಆತ ಛೇಡಿಸಿದ್ದಾನೆ.