ಹುಬ್ಬಳ್ಳಿ : ಉತ್ತರ ಕರ್ನಾಟಕದ ದಾಳಿಂಬೆ ಬೆಳೆಗಾರರ 335 ಕೋಟಿ ರೂ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿಂಬೆ ಬೆಳೆ ನಷ್ಟದಿಂದ ರೈತರು ಕಂಗಲಾಗಿದ್ದು , ಅವರ ನೆರವಿಗೆ ಸರ್ಕಾರ ಬಾರದಿರುವುದು ದುರದೃಷ್ಟಕರ ಸಂಗತಿ. ತಮಗೆ ದಯಾ ಮರಣ ನೀಡಬೇಕೆಂದು ರೈತರು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಎರಡು ವರ್ಷದ ಸರ್ಕಾರದ ಸಾಧನೆ ಶೂನ್ಯ ಎಂದು ಗೇಲಿ ಮಾಡಿದ ಕುಮಾರಸ್ವಾಮಿ, ಅನ್ನಭಾಗ್ಯ ಯೋಜನೆ ಕೊಡುವ ನೆಪದಲ್ಲಿ ಸರ್ಕಾರ ಮೋಸಮಾಡುತ್ತಿದೆ ಎಂದು ಲೇವಡಿ ಮಾಡಿದರು. ಸಮುದಾಯ ಪರಿವರ್ತನೆ ಸಮಾಜದ ಎಸ್.ಆರ್.ಹಿರೇಮಠ್ ಅವರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಭ್ರಷ್ಟ ರಾಜಕಾರಣಿಗಳ ಬಗ್ಗೆ ಜಾಲಾಡುತ್ತಿದ್ದಾರೆ. ಇದರಲ್ಲಿ ಕೆಲವರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ ಎಂದರು.