ನವದೆಹಲಿ : ಸುವರ್ಣ ಚತುಷ್ಪಥ ಯೋಜನೆ ಮೂಲಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ನಾಲ್ಕೂ ದಿಕ್ಕುಗಳನ್ನು ರಸ್ತೆ ಸಂಪರ್ಕದ ಮೂಲಕ ಬೆಸೆದರು. ಇದೀಗ ’ಭಾರತ ಮಾಲಾ' ಎಂಬ ಹೆಸರಿನ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗುವ ಮೂಲಕ ಪೂರ್ವ, ಉತ್ತರ ಹಾಗೂ ಪಶ್ಚಿಮದ ಗಡಿ ಭಾಗಗಳನ್ನು ಬೆಸೆಯಲು ಹೊರಟಿದೆ.
ಗುಜರಾತ್ ನಿಂದ ಆರಂಭವಾಗಿ ಪಂಜಾಬ್, ಜಮ್ಮು-ಕಾಶ್ಮೀರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮೂಲಕ ಮಿಜೋರಂವರೆಗೂ ಸಂಪರ್ಕ ಕಲ್ಪಿಸುವ ಈ ರಸ್ತೆ ನಿರ್ಮಾಣ ಮೋದಿ ಅವರ ಮತ್ತೂಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದಕ್ಕೆ 14 ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂಬ ಅಂದಾಜಿದೆ. ದಕ್ಷಿಣ ಭಾರತದ ಕರಾವಳಿ ನಗರಗಳನ್ನು ಬೆಸೆಯುವ ನಿರ್ಮಿಸಲು ಉದ್ದೇಶಿಸಿರುವ "ಸಾಗರ ಮಾಲಾ' ಯೋಜನೆ ಜತೆ ಇದಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಎಲ್ಲ ಯೋಜನೆ ಮುಗಿದ ಬಳಿಕ ಹೊಸ ರಸ್ತೆ ಜಾಲ ಭಾರತದ ಮಾಲೆಯಂತೆ ಕಾಣುತ್ತದೆ ಎನ್ನುವುದು ವಿಶೇಷ.
ಗಡಿಯಲ್ಲಿ ರಸ್ತೆ ಸೌಕರ್ಯ ಅಭಿವೃದ್ಧಿ ಪಡಿಸಲು ರಚನಾತ್ಮಕ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಈ ಯೋಜನೆಯನ್ನು ಭಾರತ ಮಾಲಾ ಎಂದು ಕರೆಯಲಾಗುತ್ತಿದೆ. ಎಲ್ಲ ಅನುಮತಿಗಳೂ ಲಭಿಸಿದ ಬಳಿಕ ವರ್ಷಾಂತ್ಯದಿಂದಲೇ ಕಾಮಗಾರಿ ಆರಂಭವಾಗಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಕಾರ್ಯಸಾಧು ವರದಿ ತಯಾರಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಇಲಾಖೆ ಕಾರ್ಯದರ್ಶಿ ವಿಜಯ್ ಛಿಬ್ಬರ್ ತಿಳಿಸಿದ್ದಾರೆ.
ಗಡಿಯಲ್ಲಿ ಚೀನಾ ಅತ್ಯುತ್ತಮ ರಸ್ತೆ ಸಂಪರ್ಕ ಹೊಂದಿದೆ. ಈಗ ಭಾರತವೂ ರಸ್ತೆ ಅಭಿವೃದ್ಧಿಪಡಿಸಿದರೆ ಚೀನಾಕ್ಕೆ ತಕ್ಕ ಉತ್ತರ ನೀಡಲು ಸಾಧ್ಯವಾಗುತ್ತದೆ. ಗಡಿಯಲ್ಲಿ ಸಂಪರ್ಕ ಸುಲಭವಾಗುತ್ತದೆ.
ಯುದ್ಧದ ಸಂದರ್ಭದಲ್ಲಿ ಗಡಿಗೆ ಸಮರ ಸಾಮಗ್ರಿ ಹೊತ್ತೂಯ್ಯಲು ಹಾಗೂ ಯೋಧರನ್ನು ಸಾಗಿಸಲು ಬಳಸುವ ರಸ್ತೆಗಳು ಕೆಟ್ಟದಾಗಿವೆ. ಭಾರತ ಮಾಲಾ ಯೋಜನೆಯಿಂದ ಆ ರಸ್ತೆಗಳು ಸುಧಾರಣೆಯಾಗಿ, ಯುದ್ಧದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನೆರವಿಗೆ ಬರುತ್ತವೆ.
ರಸ್ತೆ ಅಭಿವೃದ್ಧಿಯಾದರೆ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ವೃದ್ಧಿಸುತ್ತದೆ. ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ.