ಶ್ರೀನಗರ : 'ಕಾಶ್ಮೀರಿ ಪಂಡಿತ'ರ ಪುನರ್ವಸತಿಗಳಿಗಾಗಿಯೇ ನಿರ್ಮಿಸಲಾಗುತ್ತಿರುವ ಟೌನ್ ಶಿಪ್ ಗಳಲ್ಲಿ ಆಸ್ತಿ ಖರೀದಿಸಲು ಮುಸ್ಲಿಮರಿಗೂ ಅವಕಾಶ ನೀಡಲಾಗಿದೆ. ಈ ಮೂಲಕ ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್ ಶಿಪ್ ನಿರ್ಮಾಣ ಮಾಡಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಜಮ್ಮು-ಕಾಶ್ಮೀರ ಸರ್ಕಾರ ಕಾಶ್ಮೀರಿ ಪಂಡಿತರಿಗಾಗಿಯೇ ಪ್ರತ್ಯೇಕ ಟೌನ್ ಶಿಪ್ ನಿರ್ಮಾಣ ಮಾಡುವ ಪ್ರಸ್ತಾವನೆ ಹೊಂದಿಲ್ಲ ಎಂದು ಗೃಹ ಸಚಿವಾಲಯದ ಮಾಹಿತಿ ನೀಡಿದೆ. ಪಂಡಿತರಿಗೆ ನಿರ್ಮಿಸಲಾಗುವ ಟೌನ್ ಶಿಪ್ ನಲ್ಲಿ ಮುಸ್ಲಿಮರೂ ಸಹ ಮನೆ, ಆಸ್ತಿ ಖರೀದಿ ಮಾಡಬಹುದು. ಆದರೆ ಅವರ ಸ್ವಂತ ಹಣದಲ್ಲಿ ಮಾತ್ರ ಆಸ್ತಿ ಖರೀದಿ ಮಾಡಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಟೌನ್ ಶಿಪ್ ಗಳಲ್ಲಿ ಕಡಿಮೆಯೆಂದರೂ ಶೇ.50ರಷ್ಟು ಮನೆಗಳನ್ನು ಪಂಡಿತರಿಗೆ ಮೀಸಲಿಡಲಾಗುತ್ತದೆ, ರಾಜ್ಯ ಸರ್ಕಾರದ ಪ್ರಸ್ತಾವನೆ ಪ್ರಕಾರ, ಪಂಡಿತರಿಗೆ ತಮ್ಮ ಮಾತೃಭೂಮಿಗೆ ವಾಪಸ್ಸಾಗಿ ಮನೆ ಖರೀದಿಸಲು 20 ಲಕ್ಷರೂಪಾಯಿ ಹಣವನ್ನು ನೀಡಲಾಗುತ್ತದೆ. ಆದರೆ ಈ ಪ್ರಸ್ತಾವನೆಯಲ್ಲಿ ಪಂಡಿತರಿಗಾಗಿಯೇ ಪ್ರತ್ಯೇಕ ಟೌನ್ ಶಿಪ್ ನಿರ್ಮಾಣದ ಬಗ್ಗೆ ಸುಳಿವಿಲ್ಲ.
ಅನಂತ್ ನಾಗ್ ಹಾಗೂ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿಗಾಗಿ ಸ್ಥಳವನ್ನು ಗುರುತಿಸಲಾಗಿದ್ದು, ನಾಲ್ಕು ಟೌನ್ ಶಿಪ್ ಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಪ್ರತಿ ಟೌನ್ ಶಿಪ್ ನಲ್ಲೂ 2,500 ಪಂಡಿತರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ನಾಲ್ಕು ಟೌನ್ ಶಿಪ್ ಗಳಲ್ಲಿ ಒಟ್ಟು 10,000 ಪಂಡಿತರ ಕುಟುಂಬಗಳಿಗೆ ಪುನರ್ವಸತಿ ನೀಡಲಾಗುತ್ತದೆ.
ಕಾಶ್ಮೀರಿ ಪಂಡಿತರಿಗಾಗಿಯೇ ಪ್ರತ್ಯೇಕ ಟೌನ್ ಶಿಪ್ ನಿರ್ಮಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಹೇಳಿದ್ದರು. ಆದರೆ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದರು. ಇದೀಗ ಪಂಡಿತರಿಗಾಗಿ ನಿರ್ಮಿಸುವ ಟೌನ್ ಶಿಪ್ ನಲ್ಲಿ ಮುಸ್ಲಿಮರಿಗೂ ಆಸ್ತಿ ಖರೀದಿಸಲು ಅವಕಾಶವಿದೆ ಎಂಬ ಮಾತು ಕೇಳಿಬರುತ್ತಿದೆ.