ನವದೆಹಲಿ : 'ನೇಪಾಳ'-ಭಾರತದಲ್ಲಿ ಭೂಕಂಪದ ರೌದ್ರಾವತಾರಕ್ಕೆ ಸಿಲುಕಿ ಸಾವಿರಾರು ಜನರು ಸಂಕಷ್ಟ ಎದುರಿಸುತ್ತಿದ್ದರೆ, ಭೂಕಂಪದ ಬಗ್ಗೆ ಭಾರತದ ಸಂಸದರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ.
ಬಿಜೆಪಿಯ ಓರ್ವ ಸಂಸದ ಭೂಕಂಪಕ್ಕೆ ರಾಹುಲ್ ಗಾಂಧಿಯೇ ಕಾರಣ ಎಂದು ಹೇಳಿದರೆ, ಭೂಕಂಪ ಸಂಭವಿಸಿದ ಸ್ಥಳದಲ್ಲಿರುವ ತಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಲು ಭಾರತ ಸರ್ಕಾರ ಆದ್ಯತೆ ನೀಡುತ್ತಿಲ್ಲ ಎಂಬುದು ಸಮಾಜವಾದಿ ಪಕ್ಷದ ಸಂಸದನ ಆರೋಪ.
ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಸಾಕ್ಷಿಮಹಾರಾಜ್, ನೇಪಾಳ-ಭಾರತದ ಕೆಲ ಭಾಗಗಳಲ್ಲಿ ನಡೆದಿರುವ ಪ್ರಕೃತಿ ವಿಕೋಪಕ್ಕೆ ರಾಹುಲ್ ಗಾಂಧಿಯೇ ಕಾರಣ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಎಂದಿಗೂ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡದ ರಾಹುಲ್ ಗಾಂಧಿ, ಈ ಬಾರಿ ಭೇಟಿ ನೀಡಿರುವುದೇ ಭೂಕಂಪ ಸಂಭವಿಸಲು ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಮ್ಮ ಕುಟುಂಬ ಸದಸ್ಯರು ಭೂಕಂಪ ನಡೆದ ಸ್ಥಳದಲ್ಲಿ ಸಿಲುಕಿದ್ದಾರೆ ಅವರ ರಕ್ಷಣೆಗೆ ಭಾರತ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ಎಸ್.ಪಿ ಸಂಸದ ರಾಮ್ ಗೋಪಾಲ ಯಾದವ್ ಒತ್ತಾಯಿಸಿದ್ದಾರೆ. ನೇಪಾಳಕ್ಕೆ ಸಹಾಯ ಹಸ್ತ ಚಾಚಿರುವ ಭಾರತ ಸರ್ಕಾರದ ಕ್ಷಿಪ್ರ ಕಾರ್ಯಾಚರಣೆಯನ್ನು ಎಲ್ಲಾ ದೇಶಗಳೂ ಶ್ಲಾಘಿಸುತ್ತಿದ್ದರೆ, ಎಸ್.ಪಿ ಸಂಸದ ರಾಮ್ ಗೋಪಾಲ ಯಾದವ್, ತಮ್ಮ ಕುಟುಂಬದವರನ್ನು ರಕ್ಷಿಸಲು ಆದ್ಯತೆ ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಭಾರತ ಸರ್ಕಾರದ ಕಾರ್ಯಾಚರಣೆಯೇ ಸಮರ್ಪಕವಾಗಿಲ್ಲ ಎಂದು ಆರೋಪಿಸಿದ್ದಾರೆ.