ನವದೆಹಲಿ : ಭೀಕರ ಭೂಕಂಪಕ್ಕೆ ತುತ್ತಾಗಿರುವ ನೇಪಾಳಕ್ಕೆ ಎಲ್ಲಾ ರೀತಿಯಲ್ಲೂ ನೆರವು ನೀಡಲು ಭಾರತ ಸಿದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೇಪಾಳದ ಜನತೆಯ ಜತೆ ನಾವಿದ್ದೇವೆ. ನೇಪಾಳವೀಗ ಅತೀ ಕಷ್ಟದಲ್ಲಿದ್ದು, ಅವರಿಗೆ ಬೇಕಾದ ಎಲ್ಲ ಸಹಾಯವನ್ನು ನಾವು ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ
ಆಕಾಶವಾಣಿಯಲ್ಲಿ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾನು ಇಂದು ಮನಸಿನಿಂದ ಮಾತನಾಡಲು ಶಕ್ತನಿಲ್ಲ ,ನಿಮಗೆಲ್ಲ ತಿಳಿದಿರುವಂತೆ ನಿನ್ನೆ ಇಡೀ ಜಗತ್ತೇ ಮರುಗುವಂತಹ ವಿದ್ಯಮಾನ ನಡೆದಿದೆ. ನೇಪಾಳದ ನೋವು ನಮ್ಮ ನೋವು ಎಂದು ಭಾವಿಸಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿರು.
ನಾನು ಗುಜರಾತ್ ನ ಕಛ್ ನಲ್ಲಿ ಸಂಭವಿಸಿದ ಭೂಕಂಪವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ನನಗೆ ಭೂಕಂಪದ ಭಯಾನಕತೆಯ ಅರಿವಿದೆ ಎಂದರು.
ಈಗ ಮೊದಲು ಮಾಡಬೇಕಾದ ಕೆಲಸವೆಂದರೆ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಬೇಕಾಗಿದೆ. ಸೇವಾ ಪರಮೊ ಧರ್ಮ ಎನ್ನುವ ಹಾಗೆ ರಕ್ಷಣಾ ಕಾರ್ಯಾಚರಣೆಗೆ ನಮ್ಮ ಸೇನೆ ಎಲ್ಲಾ ರೀತಿಯಲ್ಲಿ ನೆರವಾಗುತ್ತಿದೆ. ವಿಶೇಷ ಪರಿಣಿತಿ ಹೊಂದಿರುವವರು ತಂಡದಲ್ಲಿದ್ದಾರೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಜನರನ್ನು ರಕ್ಷಿಸಬೇಕಾಗಿದೆ ಎಂದು ಮೋದಿ ಹೇಳಿದರು.
ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸಿದ್ದೇವೆ. ಆದಾಗ್ಯೂ, ಮುಂಬೈಯಲ್ಲಿ ಅವರ ಸ್ಮಾರಕ ನಿರ್ಮಾಣದ ಬಗ್ಗೆ ಇನ್ನೂ ವಿವಾದ ಮುಂದುವರಿಯುತ್ತಿದೆ. ಇದೀಗ ಕೇಂದ್ರ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಅನುಮತಿ ಸೂಚಿಸಿರುವುದರ ಬಗ್ಗೆ ನನಗೆ ಸಂತಸವಿದೆ. ಎಲ್ಲರಿಗೂ ವಿದ್ಯಾಭ್ಯಾಸ ನೀಡುವುದು ಅಂಬೇಡ್ಕರ್ ಆಶಯವಾಗಿತ್ತು. ಭಾರತದಲ್ಲಿ ಯಾರೊಬ್ಬರೂ ಅವಿದ್ಯಾವಂತರಾಗಿರಬಾರದು ಎಂಬುದನ್ನು ನಾವು ಖಾತರಿ ಪಡಿಸಿಕೊಳ್ಳಬೇಕಾಗಿದೆ ಎಂದರು