ಡೆಹರಾಡೂನ್ : 'ಹಿಮಾಚಲ ಪ್ರದೇಶ'ಕ್ಕೆ ತೆರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ದೇವಾಲಯದಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ದೇವರ ಬಳಿ ತನಗಾಗಿ ಏನನ್ನೂ ಬೇಡಲಿಲ್ಲ. ಆದರೆ ಅಗಾಧವಾದ ಶಕ್ತಿಯ ಅನುಭವವಾಯಿತೆಂದು ಹೇಳಿದ್ದಾರೆ. 2013 ರಲ್ಲಿ ಉಂಟಾದ ಜಲಪ್ರಳಯದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಲು ದೇವಾಲಯಕ್ಕೆ ಬಂದಿರುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಎರಡು ತಿಂಗಳ ವಿದೇಶ ಪ್ರವಾಸ ಮುಗಿಸಿ ವಾಪಸ್ ಬಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಾದಯಾತ್ರೆ ಮೂಲಕ ಕೇದಾರನಾಥೇಶ್ವರನ ದರ್ಶನ ಮಾಡಿದರು. ರಾಹುಲ್ ಗಾಂಧಿಗೆ ಹಿಮಾಚಲ ಪ್ರದೇಶ ಸಿ.ಎಂ ಹರೀಶ್ ರಾವತ್ ಸೇರಿದಂತೆ ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಸಾಥ್ ನೀಡಿದ್ದರು. ಇದೇ ವೇಳೆ 2013ರ ಜಲಪ್ರಳಯದ ಸಂತ್ರಸ್ತರಿಗೆ ಪುನರ್ವಸತಿ ನೀಡಿರುವುದು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದರ ಬಗ್ಗೆ ರಾಹುಲ್ ಗಾಂಧಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಹಿಮಾಚಲ ಪ್ರದೇಶ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.