ಬೆಂಗಳೂರು : ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ಸಂಬಂಧಿಸಿದಂತೆ ಸರ್ಕಾರ ಸೆಲೆಕ್ಟ್ ಕಮಿಟಿ ರಚಿಸುವಂತೆ ವಿಧಾನಪರಿಷತ್ ಕಲಾಪದಲ್ಲಿ ಬಿಜೆಪಿ, ಜೆಡಿಎಸ್ ಪಟ್ಟು ಹಿಡಿದಿದ್ದವು. ಬಳಿಕ ವಿಪಕ್ಷಗಳ ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆಯೂ ವಿಫಲವಾಗಿದೆ.
ಪರಿಷತ್ ನಲ್ಲಿ ಸರ್ಕಾರಕ್ಕೆ ಸೆಡ್ಡು ಹೊಡೆದಿರುವ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಕರ್ನಾಟಕ ನಗರಪಾಲಿಕೆಗಳ ತಿದ್ದುಪಡಿ ವಿಧೇಯಕ 2015' ಸೆಲೆಕ್ಟ್ ಸಮಿತಿಯ ಪರಾಮರ್ಶೆಗೆ ವಹಿಸಬೇಕು ಎಂದು ಪಟ್ಟು ಹಿಡಿದವು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರತಿಪಕ್ಷಗಳು ಯಾಕೆ ವಿಧೇಯಕ ವಿರೋಧಿಸುತ್ತಿದ್ದಾವೆ ಎಂದು ಗೊತ್ತಾಗುತ್ತಿಲ್ಲ. ಸೆಲೆಕ್ಟ ಕಮಿಟಿಗೆ ವಿಧೇಯಕ ನೀಡಿರುವುದನ್ನು ನೋಡಿಯೇ ಇಲ್ಲ ಎಂದು ಹೇಳಿದರು. ಬಳಿಕ ಬಿಜೆಪಿ, ಜೆಡಿಎಸ್ ಸದಸ್ಯರ ಮನವೊಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ಆದರೆ ವಿಪಕ್ಷ ಸದಸ್ಯರ ಮನವೊಲಿಕೆ ವಿಫಲವಾಯಿತು.
ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, 67ವರ್ಷಗಳ ಇತಿಹಾಸದಲ್ಲೇ ವಿಧೇಯಕವನ್ನು ಸೆಲೆಕ್ಟ್ ಕಮಿಟಿಗೆ ನೀಡಿದ್ದನ್ನು ನೋಡಿಯೇ ಇಲ್ಲ. ಹಾಗಾಗಿ ವಿಧೇಯಕ ಮೇಲ್ಮನೆಯಲ್ಲಿ ಪಾಸ್ ಆಗುತ್ತದೊ, ಇಲ್ಲವೋ, ಆದರೆ ನೀವು ಸೆಲೆಕ್ಟ್ ಕಮಿಟಿಗೆ ಪಟ್ಟು ಹಿಡಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬೇಡಿ ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ವಿಪಕ್ಷಗಳಲ್ಲಿ ಮನವಿ ಮಾಡಿಕೊಂಡಿರುವುದಾಗಿ ಹೇಳಿದರು.