ಡೆಹ್ರಾಡೂನ್ : 56 ದಿನಗಳ ಕಾಲ ನಿಗೂಢ ರಜೆ, ಬಳಿಕ ಸಂಸತ್ತಿನಲ್ಲಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸುದ್ದಿಯಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ಪ್ರಸಿದ್ಧ ಕೇದಾರನಾಥ ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಗುರುವಾರ ಮುಂಜಾನೆಯಿಂದಲೇ ಅವರು ಗೌರಿಕುಂಡ ಮತ್ತು ಕೇದಾರನಾಥ ನಡುವಿನ 16 ಕಿ.ಮೀ ದೂರದ ಯಾತ್ರೆಯನ್ನು ಆರಂಭಿಸಲಿದ್ದಾರೆ. ಗುರುವಾರ 5 ಕಿ.ಮೀ ದೂರವನ್ನು ಸಾಮಾನ್ಯ ಯಾತ್ರಿಕರಂತೆ ಪಾದಯಾತ್ರೆ ಮೂಲಕ ಕ್ರಮಿಸಲಿರುವ ರಾಹುಲ್ ಗಾಂಧಿ, ಗುರುವಾರ ರಾತ್ರಿ ಲಿಂಚೋಲಿಯಲ್ಲಿ ತಂಗಲಿದ್ದಾರೆ. ಬಳಿಕ ಶುಕ್ರವಾರ ಮುಂಜಾನೆಯೇ ಪಾದಯಾತ್ರೆ ಆರಂಭಿಸಿ ಬೆಳಗ್ಗೆ 8.30ರ ವೇಳೆಗೆ ಕೇದಾರನಾಥ ದೇಗುಲ ತಲುಪಲಿದ್ದಾರೆ. ಶುಕ್ರವಾರ ಮುಂಜಾನೆ ಕೇದಾರನಾಥ ದೇಗುಲ ಭಕ್ತರ ದರ್ಶನಕ್ಕೆ ತೆರೆಯಲಿದೆ.
ರಾಹುಲ್ ಗಾಂಧಿ ಅವರ ಈ ದೇಗುಲ ಯಾತ್ರೆ ವೇಳೆ ಕಾಂಗ್ರೆಸ್ ನ ಹಿರಿಯ ನಾಯಕರಾದ ಅಂಬಿಕಾ ಸೋನಿ, ಉತ್ತರಾಖಂಡ ಸಿಎಂ ಹರೀಶ್ ರಾವತ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರೆ.