ಹೊಸನಗರ : ಆಡಳಿತ ಮಾಡಲಲ್ಲ, ಆಡಳಿತ ಕಲಿಯಲು ಶ್ರೀ ರಾಮಚಂದ್ರಾಪುರ ಮಠಕ್ಕೆ ಬನ್ನಿ. ನಮ್ಮ ಮಠದಲ್ಲಿ ದಕ್ಷ –ಸಜ್ಜನ ಆಡಳಿತಗಾರರಿದ್ದು, ನೆಲದ ಕಾನೂನಿನ ಉಲ್ಲಂಘನೆಯಾಗಿಲ್ಲ, ಧರ್ಮದ ಹಾದಿಯನ್ನೂ ಮಠ ಬಿಟ್ಟಿಲ್ಲ. ಮಠ ಸ್ಥಾಪನೆ ಮಾಡಿದ್ದು ಶಂಕರಾಚಾರ್ಯರು, ಭಕ್ತರು ಕಟ್ಟಿ ಬೆಳೆಸಿದ್ದಾರೆ, ಬೇರೆಯವರಿಗೆ ಇದನ್ನು ಮುಟ್ಟುವ ಹಕ್ಕಿಲ್ಲ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.
ಹೊಸನಗರ ರಾಮಚಂದ್ರಾಪುರ ಮಠದ ಪ್ರಧಾನಮಠದ ಆವರಣದಲ್ಲಿ ಶನಿವಾರ ನಡೆದ ಐತಿಹಾಸಿಕ ಶಪಥಪರ್ವ ಸಮಾವೇಶದಲ್ಲಿ ಸಂದೇಶ ನೀಡಿದ ಅವರು, ಎಷ್ಟೇ ಆಕ್ರಮಣ ಮಾಡಿದರೂ ನಮ್ಮಿಂದ ಶಿಷ್ಯವೃಂದ ಹಾಗೂ ನಮ್ಮ ಮುಖದ ನಗು ಕಸಿದುಕೊಳ್ಳಲು ಸಾಧ್ಯವಿಲ್ಲ. ಶಿಷ್ಯರಿಗಾಗಿ ಗುರುಗಳು ತಪಸ್ಸನ್ನಾಚರಿಸುವುದು ಸಾಮಾನ್ಯ, ಆದರೆ ಇಂದು ಗುರುಗಳಿಗಾಗಿ ಮೌನ ಹಾಗೂ ಉಪವಾಸದ ಮೂಲಕ ತಪಸ್ಸನ್ನಾಚರಿಸಿದ್ದಾರೆ. ಇಂತಹ ಶಿಷ್ಯರು ಎಷ್ಟು ದುರ್ಲಭವೋ, ಇಂತಹ ಸರ್ಕಾರಗಳೂ ಕೂಡ ಅಷ್ಟೇ ದುರ್ಲಭ ಎಂದು ಮಾರ್ಮಿಕವಾಗಿ ಹೇಳಿದರು. ಯುದ್ಧ ಸುಲಭ ಆದರೆ ಸಹನೆ ಕಷ್ಟ. ಗುರುಗಳಿಗೆ ಸಹನೆ ಸಹಜ ಹಾಗೂ ಗುರುಗಳ ಸಹನೆಗೆ ಮಿತಿ ಇಲ್ಲ, ಆದರೆ ಶಿಷ್ಯರ ಸಹನೆಗೆ ಮಿತಿ ಇದೆ. ಈ ಕುರಿತು ಸರ್ಕಾರ ಎಚ್ಚರವಹಿಸಬೇಕು ಎಂಬ ಸಂದೇಶವನ್ನು ಸರ್ಕಾರಕ್ಕೆ ನೀಡಿದರು.
ಶಾರೀರಿಕವಾಗಿ, ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಒಂದು ಮಠವನ್ನು ನಾಶಪಡಿಸಲು ವರ್ಷಗಳಿಂದ ಪ್ರಯತ್ನ ನಡೆದಿದೆ. ಪುಸ್ತಕದಲ್ಲಿರುವ ಎಲ್ಲ ಕಾನೂನುಗಳು ರಾಮಚಂದ್ರಾಪುರ ಮಠವನ್ನು ಪೀಡಿಸಲಿಕ್ಕೆ ಇದೆಯ? ಎಂದು ಪ್ರಶ್ನಿಸಿದ ಶ್ರೀಗಳು, ಮಠದ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗುವ ಮುನ್ನ ಸರಿಯಾದ ಕಾರಣ ನೀಡಿ ಮುಂದುವರಿಯಿರಿ. ನಾವು ನ್ಯಾಯಲಯಗಳನ್ನು ಹಾಗೂ ಸರ್ಕಾರವನ್ನೂ ಆಗ್ರಹಿಸುವುದು ಇಷ್ಟೇ, ಕಾನೂನನ್ನು ಪ್ರಕಾರ ಹೋಗಿ, ಧಾರ್ಮಿಕ ಶ್ರದ್ಧಾಕೇಂದ್ರದಮೇಲೆ ಅನ್ಯಾಯಮಾಡಬೇಡಿ ಇದುವರೆಗೂ ನಾವು ಯಾವ ಸರಕಾರಕ್ಕೂ ವಿರುದ್ಧವಾಗಿ ಹೋದವರಲ್ಲ. ಯಾವುದೇ ಒಂದು ಪಕ್ಷ ಬೆಂಬಲಿಸಿ ನಿಂತಿಲ್ಲ. ಎಲ್ಲಿಯೂ ಚುನಾವಣಾ ರಾಜಕೀಯ ಮಾಡಿಲ್ಲ, ನಮ್ಮ ಶಿಷ್ಯರನ್ನು ನಿಮ್ಮ ರಾಜಕೀಯಕ್ಕೆ ಬಳಸಿಲ್ಲ ಹಾಗಿದ್ದರೂ ನಮ್ಮ ಮೇಲೆ ನಿಮ್ಮ ವಿರೋಧವೇಕೆ ಎಂದು ಪ್ರಶ್ನಿಸಿದ ಶ್ರೀಗಳು, ಯಾವ ಹಗರಣವೂ ಇಲ್ಲದ, ಅವ್ಯವಹಾರ ಒಲ್ಲದ ಮಠದ ಮೇಲೆ ನಿಮ್ಮ ಆಕ್ರಮಣ ಸರಿಯೇ ಜನರಿಗೆ ಉತ್ತರ ಕೊಡಿ ಎಂದರು.
ಗೋಕರ್ಣ ಹೋಗಿ ನೋಡಿ. ಹಿಂದೂ ಬಂದಿದ್ದ ಈಗ ಬರುತ್ತಿರುವ ಭಕ್ತರನ್ನು ಕೇಳಿ. ಮೊದಲು ಲೂಟಿ ಇತ್ತು ಈಗ ಪ್ರೀತಿ ಇದೆ. ಅಲ್ಲಿ ಕೊಳಕಿತ್ತು. ಈಗ ಸ್ವಚ್ಚತೆ ಇದೆ. ಆಗ ಹಸಿವಿತ್ತು. ಈಗ ಊಟ ಹಾಕಲಾಗುತ್ತಿದೆ ಇದು ತಪ್ಪ..? ಬ್ಲಾಕ್ಮೇಲ್ ಮಾಡುವ, ನಕಲಿ ಸಿಡಿ ತಯಾರಿಸುವ ವ್ಯಕ್ತಿಗಳು ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದರೂ ಅದು ತಪ್ಪು ಎನ್ನುವುದನ್ನು ನ್ಯಾಯಾಲಯವೂ ಒಪ್ಪಿದ್ದರೂ ಸರಕಾರವೇ ಅವರನ್ನು ರಕ್ಷಿಸುವುದಕ್ಕೆ ಹೋಗುತ್ತದೆ ಎಂದು ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಮಠದ ಮೇಲಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದರು.