ನವದೆಹಲಿ : ನೆಟ್ ನ್ಯೂಟ್ರಾಲಿಟಿ ಅಥವಾ ಅಂತರ್ಜಾಲ ಸಮಾನತೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.
ನೆಟ್ ನ್ಯೂಟ್ರಾಲಿಟಿ ವಿಷಯ ಲೋಕಸಭೆಯಲ್ಲಿ ಚರ್ಚೆ ಆಗಬೇಕು, ಹೀಗಾಗಿ ಪ್ರಶ್ನೋತ್ತರ ವೇಳೆಯನ್ನು ಮುಂದೂಡಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಶಂಕರ್ ಪ್ರಸಾದ್, ದೂರ ಸಂಪರ್ಕ ಪ್ರಾಧಿಕಾರದ ಶಿಫಾರಸನ್ನು ಟೆಲಿಕಾಂ ಆಯೋಗ ಪರಿಶೀಲಿಸಿ ನಂತರ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸ್ವತಃ ಪ್ರಧಾನಿ ಮೋದಿ ಸಾಮಾಜಿಕ ಜಾಲ ತಾಣಗಳು ಹಾಗೂ ಅಂತರ್ಜಾಲದಲ್ಲಿ ನಡೆಯುತ್ತಿರುವ ಆಂದೋಲನವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಟೆಲಿಕಾಂ ಹಾಗೂ ಇಂಟರ್ನೆಟ್ ಕಂಪನಿಗಳು ತಮ್ಮ ಪ್ರಾಬಲ್ಯವನ್ನು ದುರುಪಯೋಗ ಪಡೆದುಕೊಳ್ಳುತ್ತಿವೆಯೇ ಎಂದು ಪರಿಶೀಲಿಸಲಾಗುತ್ತಿದೆ. ಇದು ಕೇವಲ ಕ್ಷೇತ್ರೀಯ, ದಟ್ಟಣೆ ವಿಷಯವೋ ಅಥವಾ ಸ್ಪರ್ಧಾ ನಿಯಮಗಳ ಉಲ್ಲಂಘನೆಯೋ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ಸ್ಪರ್ಧಾ ಆಯೋಗ (ಸಿಸಿಐ) ತಿಳಿಸಿತ್ತು.
ಸೇವಾ ಪೂರೈಕೆದಾರರಿಂದ ಡೇಟಾ ಪ್ಯಾಕ್ ಪಡೆಯುವ ಬಳಕೆದಾರರು ತಾವು ನಿರ್ಧರಿಸಿದ ವೆಬ್ ಸೈಟ್ಗಳು ಹಾಗೂ ಆಪ್ಗಳನ್ನು ಮುಕ್ತವಾಗಿ ಬಳಸಲು ಸಾಧ್ಯವಾಗುವುದೇ ನೆಟ್ ಸಮಾನತೆ. ಆದರೆ, ಸೇವಾ ಪೂರೈಕೆದಾರರು ತಮಗೆ ಇಂತಿಷ್ಟು ಶುಲ್ಕ ನೀಡುವ ವೆಬ್ ಸೈಟ್ಗಳನ್ನು ಮಾತ್ರ ಗ್ರಾಹಕರು ಉಚಿತವಾಗಿ ಬಳಸಲು ಅವಕಾಶ ನೀಡಿ, ಹಣ ನೀಡದಿರುವ ವೆಬ್ ಸೈಟ್ಗಳನ್ನು ಬ್ಲಾಕ್ ಮಾಡುವುದು ಕಳವಳಕ್ಕೆ ಕಾರಣವಾಗಿದೆ.