ಮುಂಬೈ : 'ಕಾಶ್ಮೀರ'ದಲ್ಲಿ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಧ್ವಜ ಹಾರಿಸಿದ್ದ ಬೆನ್ನಲ್ಲೇ ಓವೈಸಿ ಸಹೋದರರ ವಿರುದ್ಧ ಶಿವಸೇನೆ ಗಂಭೀರ ಆರೋಪ ಮಾಡಿದೆ. ಮಹಾರಾಷ್ಟ್ರದಲ್ಲೂ ಓವೈಸಿ ಸಹೋದರರು, ಪಾಕಿಸ್ತಾನದ ಧ್ವಜಾರೋಹಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ.
ಶಿವಸೇನೆ ಮುಖವಾಣಿ, ಸಾಮ್ನಾದಲ್ಲಿ ಓವೈಸಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಸಂಭಾಜಿ ನಗರದಲ್ಲಿ ಪಾಕ್ ಧ್ವಜಾರೋಹಣ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದೆ.
ಇತ್ತೀಚೆಗಷ್ಟೇ ನಡೆದ ಬಾಂದ್ರಾ ವಿಧಾನಸಭೆಯ ಉಪಚುನಾವಣೆಯಲ್ಲಿ ಓವೈಸಿ ಸಹೋದರರು ಹಸಿರು ಬಾವುಟ ಹಿಡಿದು ಬಂದಿದ್ದರು. ಆದರೆ ಅಲ್ಲಿ ಉಂಟಾಗಿರುವ ಸೋಲನ್ನು ಮರೆಯಬಾರದು ಎಂದು ಶಿವಸೇನೆ ಎಐಎಂಐಎಂ ಪಕ್ಷಕ್ಕೆ ಎಚ್ಚರಿಕೆ ನೀಡಿದೆ. ಇನ್ನು ಸಂಭಾಜಿ ನಗರ ಹಾಗೂ ನವಿ ಮುಂಬೈ ನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಶಿವಸೇನೆ ಗೆಲುವು ಖಚಿತ ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಬಾಂಗ್ಲಾದೇಶದ ಅಕ್ರಮ ವಲಸಿಗರ ಬಗ್ಗೆಯೂ ಪ್ರಸ್ತಾಪಿಸಲಾಗಿದ್ದು, ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಕಳ್ಳತನ ಹಾಗೂ ದರೋಡೆಗಳು ಹೆಚ್ಚಾಗುತ್ತಿದೆ ಎಂದು ಶಿವಸೇನೆ ಆರೋಪಿಸಿದೆ. ಹೆಚ್ಚುತ್ತಿರುವ ಅಕ್ರಮ ವಲಸಿಗರ ಸಂಖ್ಯೆ ನವಿ ಮುಂಬೈ ನಲ್ಲಿ ಮಿನಿ ಪಾಕಿಸ್ತಾನವನ್ನು ನಿರ್ಮಿಸುತ್ತಿದೆ ಎಂದು ಶಿವಸೇನೆ ಹೇಳಿದೆ.