ನವದೆಹಲಿ : ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರ ನಿಜ ಬಣ್ಣ ಗುರುತಿಸದೆ ನಾವು ದೊಡ್ಡ ತಪ್ಪು ಮಾಡಿದೆವು ಎಂದು ಎಎಪಿಯಿಂದ ಉಚ್ಚಾಟಿಸಲ್ಪಟ್ಟ ಸ್ಥಾಪಕ ಮುಖಂಡರಾದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರಶಾಣ್ತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್, ಎಎಪಿ ಖಾಪ್ ಪಂಚಾಯತ್ ರೀತಿ ಆಗುತ್ತಿದೆ. ಕೇಜ್ರಿವಾಲ್ ಅಸಲಿ ಬಣ್ಣ ಈಗ ಬಯಲಾಗುತ್ತಿದೆ. ಅರವಿಂದ್ ಕೇಜ್ರಿವಾಲ್ ಒಬ್ಬ ನ್ಯೂ ಹಿಟ್ಲರ್ ಎಂದು ಆರೋಪಿಸಿದರು.
ಎಎಪಿ ರಾಷ್ಟ್ರೀಯ ಶಿಸ್ತುಪಾಲನಾ ಸಮಿತಿ ಕೈಗೊಂಡ ನಿರ್ಧಾರ ನಮಗೆ ತುಂಬಾ ನೋವನ್ನುಂಟು ಮಾಡಿದೆ. ಆದರೆ ನಮ್ಮನ್ನು ಪಕ್ಷದಿಂದ ಉಚ್ಚಾಟಿಸಿರುವುದು ನಮಗೆ ಅಚ್ಚರಿ ತಂದಿಲ್ಲ. ಕಳೆದ ಕೆಲವು ದಿನಗಳ ಬೆಳವಣಿಗೆ ಆ ನಿಲುವಿನ ಮುನ್ಸೂಚನೆಯೇ ಆಗಿತ್ತು ಎಂದು ಹೇಳಿದರು.
ಕಳೆದ ಕೆಲ ದಿನಗಳಿಂದ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಬಂಡಾಯವೆದ್ದಿದ್ದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಸೇರಿದಂತೆ ನಾಲ್ವರು ನಾಯಕರನ್ನು ಆಮ್ ಆದ್ಮಿ ಪಕ್ಷದಿಂದ ಸೋಮವಾರ ರಾತ್ರಿ ಉಚ್ಚಾಟಿಸಲಾಗಿತ್ತು.