ಬೆಂಗಳೂರು : ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ವಿಧಾನಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿ.ಟಿ.ರವಿ ಅವರು ಮಾತುಕತೆ ನಡೆಸಿ ಮನವೊಲಿಸಿದ ನಂತರ ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ವಾಪಸ್ ಪಡೆಯುವ ನಿರ್ಧಾರ ಕೈಗೊಂಡರು.
ಸೋಮವಾರ ವಿಧಾನಸಭೆಯ ಅಧಿವೇಶನಕ್ಕೂ ಮೊದಲು ಈ ಮಾತುಕತೆ ನಡೆಯಿತು. ತಾವು ಶಾಸಕರಾಗಿದ್ದರಿಂದಲೇ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರಿಂದ ಕ್ಷೇತ್ರದ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ರಾಜೀನಾಮೆ ನೀಡುವುದೇ ಸೂಕ್ತ ಎಂಬ ನಿಲುವಿಗೆ ಬಂದಿದ್ದೆ ಎಂಬ ಮಾತನ್ನು ಆನಂದ್ ಸಿಂಗ್ ಅವರು ಪಕ್ಷದ ನಾಯಕರಿಗೆ ವಿವರಿಸಿದರು. ಆದರೆ, ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸನ್ನಿವೇಶಗಳನ್ನು ಎದುರಿಸುವುದು ಸೂಕ್ತ ಎಂಬ ಪಕ್ಷದ ನಾಯಕರ ತಿಳಿವಳಿಕೆ ನಂತರ ಆನಂದ್ ಸಿಂಗ್ ನಿಲವು ಬದಲಿಸಿದರು.
ವಿಧಾನಸಭೆಯ ಕಲಾಪ ಆರಂಭವಾಗುವ ಮೊದಲು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಕೊಠಡಿಗೆ ಪಕ್ಷದ ನಾಯಕರೊಂದಿಗೆ ತೆರಳಿದ ಆನಂದ್ ಸಿಂಗ್ ಅವರು ರಾಜೀನಾಮೆ ಪತ್ರ ವಾಪಸ್ ಪಡೆಯುತ್ತಿರುವುದಾಗಿ ಲಿಖೀತ ಹೇಳಿಕೆ ನೀಡಿದರು ಎಂದು ತಿಳಿದುಬಂದಿದೆ.