ಬೆಂಗಳೂರು : ಈಗಾಗಲೇ ಮೂರುವರೆ ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ಜೈಲುಪಾಲಾಗುವ ಸಾಧ್ಯತೆ ಇದೆ.
ಈ ಹಿಂದೆ ಆಂಧ್ರಪ್ರದೇಶದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟು ಹಲ ವರ್ಷ ಜೈಲಿನಲ್ಲಿದ್ದ ರೆಡ್ಡಿ ಅವರನ್ನು ಇದೀಗ ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಂಧಿಸುವ ಸಂಭವ ಇದೆ.
ಕರ್ನಾಟಕ ಭಾಗದಲ್ಲಿನ ಅಕ್ರಮ ಗಣಿಗಾರಿಕೆಯ ರಹಸ್ಯ ಕೆದುಕುತ್ತಿರುವ ವಿಶೇಷ ತನಿಖಾ ತಂಡವು (ಎಸ್.ಐ.ಟಿ) ಹಲವು ಮಾಹಿತಿಗಳನ್ನು ಕಲೆಹಾಕಿದೆ.
ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಈಗಾಗಲೇ ಶಾಸಕ ನಾಗೇಂದ್ರ ಅವರ ಆಪ್ತ ನಾಗರಾಜು ಮತ್ತು ಶಾಸಕ ಆನಂದ್ ಸಿಂಗ್ ಸೇರಿದಂತೆ ಹಲವರನ್ನು ಬಂಧಿಸಿದೆ. ನಾಗೇಂದ್ರ ಅವರನ್ನು ಸಹ ಬಂಧಿಸಲಾಗಿದ್ದು, ಸದ್ಯಕ್ಕೆ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಜನಾರ್ದನರೆಡ್ಡಿ ಅವರು ಬಂಧನಕ್ಕೊಳಗಾಗುವ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಬಗ್ಗೆ ತಮ್ಮ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದ ಓಬುಳಾಪುರಂ ಗಣಿ ಹಗರಣಕ್ಕೆ ಸಂಬಂಧಿಸಿದಂತೆ 2015ರ ಜನವರಿ ತಿಂಗಳಲ್ಲಿ ಜನಾರ್ದನ ರೆಡ್ಡಿ ಜೈಲಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಎಸ್.ಐ.ಟಿಯ ಕಾರ್ಯಾಚರಣೆಯನ್ನು ಗಮನಿಸಿದರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಜನಾರ್ದನರೆಡ್ಡಿ ಅವರನ್ನು ಸಹ ಬಂಧಿಸುವ ಸಾಧ್ಯತೆಗಳಿವೆ.
ಆದರೆ, ಯಾವಾಗ ಬಂಧನವಾಗುತ್ತದೆ ಎಂಬುದು ನಿಖರವಾದ ಮಾಹಿತಿ ಇಲ್ಲ. ಶಾಸಕರಾದ ಸುರೇಶ್ ಬಾಬು, ಸತೀಶ್ ಸೈಲ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿಚಾರಣೆ ಬಳಿಕ ಜನಾರ್ದನ ರೆಡ್ಡಿ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಎಸ್ಐಟಿ ಮೂಲಗಳ ಪ್ರಕಾರ ಯಾರನ್ನೂ ಸುಮ್ಮನೆ ಬಂಧಿಸುವುದಿಲ್ಲ. ಅಗತ್ಯವೆನಿಸಿದರೆ ಮಾತ್ರ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಹೇಳಿವೆ.
ವಿಚಾರಣೆ ವೇಳೆ ಸೂಕ್ತವಾಗಿ ಉತ್ತರ ನೀಡದಿದ್ದ ಕಾರಣ ಕೆಲವರನ್ನು ಬಂಧಿಸಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಎಫ್.ಐ.ಆರ್ ಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.